ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯುವ ದಿನಾಚರಣೆ
ಮಡಿಕೇರಿ:ಅಂತರರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಡಗು ಜಿಲ್ಲೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2025 ಎಚ್ಐವಿ/ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಸನತ್ ಕುಮಾರ್ ಎಚ್ಐವಿ/ ಏಡ್ಸ್ ಕುರಿತು, ಎಚ್ಐವಿ/ ಏಡ್ಸ್ ನ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಲ್ಲಿ ಯುವಕರ ಹಾಗೂ ಇತರರ ಪಾತ್ರವನ್ನು ಮನದಟ್ಟು ಮಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ ಮಾತನಾಡಿ ಹದಿಹರೆಯದ ಯುವಕರಲ್ಲಿ ಏಡ್ಸ್ ಹರಡುವಿಕೆ ಹಾಗೂ ಅದರಿಂದ ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಬೇಕು ಎಂದು ವಿವರಿಸಿದರು. ಇತ್ತೀಚಿಗೆ ನಡೆಯುವಂತಹ ಎಂ ಎಂ ಎಸ್ ಲೈಂಗಿಕ ಕ್ರಿಯೆ ಯುವಜನತೆಯಲ್ಲಿ ತುಂಬಾ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವಂತೆ, ಎಲ್ಲರೂ ಜಾಗರೂಕರಾಗಿರಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಘವ ಬಿ., ಅಂತರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ವಯಂಸೇವಕರು ಸಮಾಜದ ಅಭಿವೃದ್ಧಿಗೆ ತುಂಬಾ ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಯುವಕರಲ್ಲಿ ಈ ಬದಲಾವಣೆ ಅನಿವಾರ್ಯ ಎಂದು ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿ ಅಲೋಕ್ ಬಿಜೈ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಯೋಜನಾಧಿಕಾರಿ ಡಾ. ಶೈಲಶ್ರೀ ಕೆ ವಂದನಾರ್ಪಣೆಯನ್ನು ಮಾಡಿದರು.
ಎನ್ ಎಸ್ ಎಸ್ ಸ್ವಯಂಸೇವಕಿ ಕುಮಾರಿ,ಕವನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಿ.ಎ.ಪಿ.ಸಿ.ಯು ಸಿಬ್ಬಂದಿಗಳಾದ ಕಮಲ ಮತ್ತು ಉಷಾ ಹಾಗೂ ಆರ್ ಆರ್ ಸಿ, ಎನ್ಎಸ್ಎಸ್ ಸ್ವಯಂಸೇವಕರು, ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.