ಸೋಮವಾರಪೇಟೆ; ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಸೋಗಿನ ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವಂತೆ ಆಗ್ರಹಿಸಿ ಮಾ.2ರಂದು ಪ್ರತಿಭಟನೆ

ಸೋಮವಾರಪೇಟೆ; ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಸೋಗಿನ ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವಂತೆ  ಆಗ್ರಹಿಸಿ ಮಾ.2ರಂದು ಪ್ರತಿಭಟನೆ

ಸೋಮವಾರಪೇಟೆ:ಕೊಡಗು ಜಿಲ್ಲಾದ್ಯಾಂತ ಆವರಿಸಿಕೊಂಡಿರುವ ಅಸ್ಸಾಂ ಸೋಗಿನ ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವಂತೆ ಕೇಂದ್ರ ಹಾಗು ರಾಜ್ಯ ಸರ್ಕಾರವನ್ನು ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.ಮಾ.2 ರಂದು ಪಟ್ಟಣದಲ್ಲಿ ಅಕ್ರಮ ವಲಸಿಗರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

 ಅಂದು ಬೆಳಿಗ್ಗೆ ಕಕ್ಕೆಹೊಳೆ ಸಮೀಪದ ಶ್ರೀ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಜೇಸಿ ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆದು, ನಂತರ ತಹಸೀಲ್ದಾರ್ ಅವರ ಮೂಲಕ ಪ್ರಧಾನ ಮಂತ್ರಿಯವರಿಗೆ, ಗೃಹ ಇಲಾಖೆಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

 ಅಕ್ರಮ ವಲಸಿಗರ ವಿರುದ್ಧ ಕಳೆದ ೧೦ ವರ್ಷಗಳಿಂದ ಕರವೇ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಸೂಕ್ತ ಕ್ರಮಕೈಗೊಂಡಿಲ್ಲ. ಪ್ರಸಕ್ತ ಅಕ್ರಮ ವಲಸಿಗರ ಹಾವಳಿ ಮಿತಿಮೀರಿದೆ. ಇನ್ನಾದರೂ ಗೃಹ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಇಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ.

ಎನ್‌ಐಎ ಮೂಲಕ ತಪಾಸಣೆ ನಡೆಸಬೇಕಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಕಾನೂನಿನಂತೆ ಗಡಿಪಾರು ಮಾಡಬೇಕು. ಗೃಹ ಇಲಾಖೆಗೆ ಒಂದು ತಿಂಗಳ ಗಡುವು ನೀಡಲಾಗುವುದು. ತಪ್ಪಿದ್ಲಲಿ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಲೈನ್‌ಮನೆಯಲ್ಲಿ ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ಕೊಟ್ಟಿರುವ ಮಾಲೀಕರ ವಿರುದ್ದ ಕಡ್ಡಾಯವಾಗಿ ಕ್ರಿಮಿನಲ್ ಮತ್ತು ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. 

ಕಾರ್ಮಿಕರ ಸೋಗಿನಲ್ಲಿರುವ ಅಕ್ರಮ ವಲಸಿಗರಿಂದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕನ್ನಡಿಗರ ಅನ್ನವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಲ್ಲಿನ ಕಾರ್ಮಿಕರು ಕೂಲಿ ಇಲ್ಲದೆ ಪರದಾಡುತ್ತಿದ್ದಾರೆ. ವಲಸಿಗರು ದೇಶದ ಕಾನೂನನ್ನು ಗೌರವಿಸುತ್ತಿಲ್ಲ. ಕೆಲ ಕಡೆ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ, ಮದ್ಯಪಾನ ಮಾಡುತ್ತಾರೆ.

ಗೋಮಾಂಸ ಮಾರಾಟ ಮಾಡುತ್ತಾರೆ. ಗೋಹತ್ಯೆಯಲ್ಲೂ ಭಾಗಿಯಾಗುತ್ತಿದ್ದಾರೆ. ಬಾಡಿಗೆ ವಾಹನ ಓಡಿಸುತ್ತಿದ್ದಾರೆ. ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸೆಲೂನ್‌ಗಳನ್ನು ನಡೆಸುತ್ತಿದ್ದಾರೆ. ಬ್ರೋಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳಿಯರ ಮೇಲೆ ಹಲ್ಲೆಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ೩೫ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ(ಕನ್ನಡಿಗರಿಗೆ ಕಡ್ಡಾಯ ಉದ್ಯೋಗ) ವರದಿಯನ್ನು ಕೂಡಲೆ ಜಾರುಗೊಳಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ್ ಆಚಾರ್ಯ, ನಗರ ಘಟಕ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯದರ್ಶಿ ಕೆ.ಪಿ.ರವೀಶ್, ಸಂಚಾಲಕ ಶೇಖರ್ ತಾಕೇರಿ ಇದ್ದರು.