ಕೊಡವ ಹಾಕಿ ನಮ್ಮೆ: ಅಜ್ಜಿಕುಟ್ಟಿರ ಕುಟುಂಬ ಪ್ರಾಯೋಜಕತ್ವ, ಪೂರ್ವಭಾವಿ ಸಭೆ
ಗೋಣಿಕೊಪ್ಪಲು, ಜೂನ್ 20*: ಮುಂದಿನ ಸಾಲಿನಲ್ಲಿ ಜರುಗಲಿರುವ ಕೊಡವ ಹಾಕಿ ನಮ್ಮೆಯ ಪ್ರಾಯೋಜಕತ್ವವನ್ನು ಅಜ್ಜಿಕುಟ್ಟಿರ ಕುಟುಂಬದವರು ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯಾವಳಿಯ ಪೂರ್ವಭಾವಿ ಸಭೆ ಗೋಣಿಕೊಪ್ಪಲಿನಲ್ಲಿ ಇಂದು ನಡೆಯಿತು.
ಅಜ್ಜಿಕುಟ್ಟಿರ ಕುಟುಂಬದ ಹಾಕಿ ನಮ್ಮೆ ಆಯೋಜನಾ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ ಸಭೆಯಲ್ಲಿ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮಾತನಾಡಿದರು. ಮುಂದಿನ ಸಾಲಿನಲ್ಲಿ ವಿಜೃಂಭಣೆಯಿಂದ ಹಾಕಿ ನಮ್ಮೆ ನಡೆಸುವ ನಿಟ್ಟಿನಲ್ಲಿ ಹಲವು ಅಮೂಲ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಮಾತನಾಡಿದ ಅಜ್ಜಿಕುಟ್ಟಿರ ಕುಟುಂಬದ ಹಾಕಿ ನಮ್ಮೆಯ ಅಧ್ಯಕ್ಷರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಅವರು, "ಹಾಕಿ ಪಂದ್ಯಾವಳಿಯನ್ನು ಅಭೂತಪೂರ್ವವಾಗಿ ನಡೆಸುವುದರೊಂದಿಗೆ ಎಲ್ಲರ ಮೆಚ್ಚುಗೆ ಪಾತ್ರರಾಗುವಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕು" ಎಂದು ಕರೆ ನೀಡಿದರು.
ಈ ಸಭೆಯು ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿತ್ತು. ಪಂದ್ಯಾವಳಿಯ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂಬ ಒಮ್ಮತದ ಅಭಿಪ್ರಾಯಕ್ಕೆ ಸಭೆ ಬಂದಿತು. ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಕುಟುಂಬದ ಸದಸ್ಯರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಾಂಡ ಬೋಪಣ್ಣ, ಅಕಾಡೆಮಿಯ ಸದಸ್ಯರು, ನಿರ್ದೇಶಕರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

