ನಾಳೆಯಿಂದ ಕೊಂಡಂಗೇರಿ ಮಖಾಂ ಉರೂಸ್ ಆರಂಭ

ನಾಳೆಯಿಂದ ಕೊಂಡಂಗೇರಿ ಮಖಾಂ ಉರೂಸ್ ಆರಂಭ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಇತಿಹಾಸ ಪ್ರಸಿದ್ಧ ಕೊಂಡಂಗೇರಿ ಮಖಾಂ ಉರೂಸ್ ಸಮಾರಂಭವು ಏ. 10ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಪೇರಿಯಂಡ. ಎ.ಯೂಸುಫ್ ಹಾಜಿ ತಿಳಿಸಿದ್ದಾರೆ.

ಕೊಂಡಂಗೇರಿ ಜಮಾಅತ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಯೂಸುಫ್ ಹಾಜಿ ಅವರು ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ,ಧರ್ಮ, ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಜಮಾಅತ್ ಕಾರ್ಯದರ್ಶಿ ಪಿ. ಎ.ಮುಜೀಬ್ ಮಾತನಾಡಿ ಏ.10ರ ಶುಕ್ರವಾರ ಜುಮಾ ನಮಾಜಿನ ಬಳಿಕ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಹಾಗೂ ಉಪಾಧ್ಯಕ್ಷರಾದ ಬಶೀರ್ ಅವರು ಜಂಟಿಯಾಗಿ ದ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಿದ್ದಾರೆ.

 ಸಯ್ಯದ್ ಎಸ್ ಹಕೀಂ ಅಸ್ಸಖಾಫ್ ಆದೂರ್ ತಂಙಳ್ ಮಖಾಂ ಅಲಂಕಾರ,ಖತಂ ದುಆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಅಂದು ರಾತ್ರಿ ಅಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದ್ದು ಪ್ರಖ್ಯಾತ ವಾಗ್ಮಿ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಮತ ಪ್ರವಚನ ನಡೆಸಲಿದ್ದಾರೆ. ಏ.11 ರಂದು ರಾತ್ರಿ ಮೊಹಮ್ಮದ್ ರಾಫಿ ಹಿಮಾಮಿ ಸಖಾಫಿ ದೇರಳಕಟ್ಟೆ ಮತ ಪ್ರವಚನಕ್ಕೆ ನೇತೃತ್ವ ವಹಿಸಲಿದ್ದಾರೆ.ಏ.12 ರಂದು ನೌಫಲ್ ಸಖಾಫಿ ಕಳಸ ಧಾರ್ಮಿಕ ಪ್ರವಚನ ನಡೆಸಲಿದ್ದಾರೆ.

 ಏ.13ರಂದು ಮದ್ಯಾಹ್ನ 1 ಗಂಟೆಗೆ ಜಮಾಅತ್ ಅಧ್ಯಕ್ಷರಾದ ಪೇರಿಯಂಡ ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು ಸಯ್ಯಿದ್ ಶಿಯಾಬುದ್ದೀನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕರ್ನಾಟಕ ರಾಜ್ಯ ವಖ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಮುಖ್ಯ ಭಾಷಣ ಮಾಡಲಿದ್ದಾರೆ.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ,ಮಡಿಕೇರಿ ಶಾಸಕರಾದ ಡಾ.ಮಂಥರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ.

ಅಂದು ಸಂಜೆ 4 ಗಂಟೆಗೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ ಪ್ರಖ್ಯಾತ ವಾಗ್ಮಿ ಡಾ.ಫಾರೂಕ್ ನಈಮಿ ಕೊಲ್ಲಂ ಧಾರ್ಮಿಕ ಮತಪ್ರವಚನ ನಡೆಯಲಿದ್ದಾರೆ. ಏ.14 ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಖ್ಯಾತ ವಾಗ್ಮಿ ಪೇರೋಡ್ ಮೊಹಮ್ಮದ್ ಅ ಝ್ಹರಿ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದು,ಸಯ್ಯಿದ್ ಕೆಎಸ್ ಅಟಕೋಯಾ ತಂಙಳ್ ಕುಂಬೋಳ್ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವಾರು ಉಲಮಾ,ಉಮಾರ, ರಾಜ್ಯಕೀಯ,ನೇತಾರರು ಸೇರಿದಂತೆ ಮತ್ತಿತರರು ಪ್ರಮುಖರು ಭಾಗವಹಿಸಲಿದ್ದು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮುಜೀಬ್ ಕೋರಿದರು. ಸುದ್ದಿಗೊಷ್ಟಿಯಲ್ಲಿ ಕೊಂಡಂಗೇರಿ ಜಮಾಅತ್ ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ,ಹೆಚ್ಚುವರಿ ಕಾರ್ಯದರ್ಶಿ ಜೆ.ಎಸ್. ಮೊಹಮ್ಮದ್ ಹನೀಫ್,ಆಡಳಿತ ಮಂಡಳಿ ಸದಸ್ಯರಾದ ಟಿ.ಎಂ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.