ಕುಶಾಲನಗರ; ಬೀದಿ ನಾಯಿಗಳಿಗೆ ಮೇಕೆ ಬಲಿ
ಕಣಿವೆ : ಕುಶಾಲನಗರ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಎಲ್ಲೆ ಮೀರಿದ್ದು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಹೈರಾಗುತ್ತಿದ್ದಾರೆ. ಸೋಮವಾರ ರಾತ್ರಿ ನಗರದ ಆದರ್ಶ ದ್ರಾವಿಡ ಬಡಾವಣೆ ನಿವಾಸಿಯೂ ಆದ ಪುರಸಭೆ ನೌಕರ ಬಣ್ಣಾರಿ ಎಂಬವರಿಗೆ ಸೇರಿದ ಸುಮಾರು 20 ಸಾವಿರ ರೂ. ಬೆಲೆಬಾಳುವ ಎರಡು ಮೇಕೆಗಳನ್ನು ಕಳೆದ ಎರಡು ದಿನಗಳ ಈಚೆಗೆ ಬೀದಿನಾಯಿಗಳು ಬಲಿಪಡೆದಿರುವ ಕುರಿತು ಪಾಲಕ ಬಣ್ಣಾರಿ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದು ಸೂಕ್ತ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೇ ಸ್ಥಳೀಯ ಪಶುಪಾಲನಾ ಇಲಾಖೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಳಿ ತೆರಳಿ ಘಟನೆಯನ್ನು ವಿವರಿಸಿದ್ದು ಸೂಕ್ತ ಪರಿಹಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳಿಂದ ನಷ್ಟಕ್ಕೆ ತುತ್ತಾದ. ಮೇಕೆಗಳ ಪಾಲಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಲಾಗಿದೆ. ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಧಾಳಿಯಿಂದ ಪುರದ ಸಾರ್ವಜನಿಕರಿಗೆ ರಕ್ಷಣೆ ನೀಡುವ ಮುನ್ನಾ, ಮೊದಲು ಪುರಸಭೆಯ ನೌಕರರಿಗೆ ನ್ಯಾಯ ಒದಗಿಸಬೇಕಿದೆ.
ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಉಪಟಳವನ್ನು ನಿಗ್ರಹಿಸಬೇಕೆಂದು ಸಾರ್ವಜನಿಕರು ಕೂಡ ಒತ್ತಾಯಿಸಿದ್ದು, ಪುರಸಭೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗೆಯೇ, ಪುಟ್ಟ ಮಕ್ಕಳನ್ನು ಹಿಡಿದು ಘಾಸಿಗೊಳಿಸುವ ಮುನ್ನಾ ಪುರಸಭೆ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರು ಒತ್ತಾಯವಾಗಿದೆ.