ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ - ಸುಕೃತ ದವರಿಂದ ಸಂಭ್ರಮದ ಮಕರ ಸಂಕ್ರಾತಿ ಆಚರಣೆ
ಕುಶಾಲನಗರ; ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಹಂಚಿಕೊಳ್ಳುವುದು ಒಂದು ಸುಂದರ ಸಂದೇಶ ,ಎಳ್ಳು ಜೀವನದ ಕಷ್ಟವನ್ನು ಹಾಗೆ ಬೆಲ್ಲ ಜೀವನದ ಸುಖವನ್ನು ಸೂಚಿಸುತ್ತದೆ.ಜೀವನದಲ್ಲಿ ಸುಖ ದುಃಖವನ್ನು ಸಮಾನಾಗಿ ಸ್ವೀಕರಿಸಿ ಮಾತು ಸಿಹಿಯಾಗಿರಲಿ ಎಂಬ ಸಂದೇಶ ಇದರಲ್ಲಿ ಅಡಗಿದೆ .ಜೊತೆಗೆ ಚಳಿಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವ ಆಹಾರವು ಹೌದು, ಸಂಕ್ರಾಂತಿ ಹಬ್ಬದ ಆಚರಣೆಯ ಮೂಲಕ ನಾವು ಪ್ರೀತಿ ಸೌಹಾರ್ದ,ಮತ್ತು ಒಗ್ಗಟ್ಟು ಸಾರಬೇಕು ಎಂದು ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ಸಂಕ್ರಾಂತಿ ಸಂಭ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಮತಿ ಕಲಾ ಕರಂದ್ಲಾಜೆ ಅವರು ಹೇಳಿದರು.
ಹಾಗೆಯೇ ಒಕ್ಕಲಿಗ ಮತ್ತು ಭೂಮಿ ಹಾಗೂ ರಾಸುಗಳ ನಡುವೆ ಒಂದು ಬಿಡಿಸಲಾಗದ ಬಂಧವಿದೆ, ನಮ್ಮ ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಎತ್ತು ನೋಡು, ಹಸುನೋಡು, ನೇಗಿಲು ನೋಡು, ಎನ್ನುವ ಕಾಲವೊಂದಿತ್ತು ಆದರೆ ಈಗ ಆ ಕಾಲ ಬದಲಾಗುತ್ತಿದೆಯಷ್ಟೇ, ಕುವೆಂಪುರವರ ಸಾಲು ನೇಗಿಲ ಮೇಲೆ ನಿಂತಿದೆ ಎನ್ನುವುದನ್ನು ನಮ್ಮ ಪೂರ್ವಿಕರು ಅಕ್ಷರಶಃ ಅನುಭವಿಸಿ ಪಾಲಿಸುತ್ತಿದ್ದರು. ಆದರೆ ಇಂದು ಬದಲಾವಣೆ ನಮ್ಮ ತನವನ್ನು ಮರೆ ಮಾಚಿದೆ ಅಷ್ಟೆ ಎಂದು ಸಂಕ್ರಾತಿ ಬಗ್ಗೆ ಮಾತನಾಡಿದ ಸಂಘದ ಸದಸ್ಯರಾದ ಅನಿತಾ ನಂಗಾರು ಹೇಳಿದರು.
ಸಂಘದ ಮತ್ತೊಬ್ಬ ಸದಸ್ಯರಾದ ಶ್ರೀಮತಿ ಲತಾ ಕಾಳೆರಮ್ಮನ ರವರು ಮಾತನಾಡಿ ಸರ್ವಜ್ಞ ಹೇಳುವಂತೆ ಒಕ್ಕಲಿಗ ದುಡಿದು ತಾನಿಕ್ಕುವನು ಅನ್ನವನು, ಜಗದ ಜನ ನಕ್ಕು ನಲಿಸುವುದಕ್ಕೆ ಕಾರಣ ಒಕ್ಕಲಿಗನ ಅನ್ನ ಎಂಬ ವಚನದ ಸಾಲುಗಳು ಸಾರ್ವಕಾಲಿಕ , ಕೃಷಿ ಕಾಯಕ ಮಾಡುವ ಪ್ರತಿಯೊಬ್ಬ ಭಾಗ್ಯವಂತರಿಗೂ ನಮ್ಮ ಹಬ್ಬ ಸಂಕ್ರಾಂತಿಯ ಶುಭಾಶಯವನ್ನು ಕೋರಿದರು. ಈ ಸಂದರ್ಭ ಸಂಘದ ಎಲ್ಲಾ ಮಹಿಳೆಯರು ಮಕರ ಸಂಕ್ರಾಂತಿ ಹಬ್ಬವನ್ನು ಸಾಂಕೇತಿಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ಜಾನಪದ ಕೃಷಿ ಪರಿಕರಗಳು ಹಳೆ ಕಾಲದ ವಸ್ತುಗಳನ್ನು ಇರಿಸಿ ಧಾನ್ಯ ಲಕ್ಷ್ಮಿಗೆ ಪೂಜೆಸಲ್ಲಿಸಿ ದೀಪ ಬೆಳಗಿ ಎಳ್ಳು ಬೆಲ್ಲ ಹಂಚಿಕೊಂಡು ಸಂಭ್ರಮಿಸಿದರು.
ಸಂಘದ ಸದಸ್ಯರಾದ ಶ್ರೀಮತಿ ಸೂದನ ಅನಿತಾ ಹಾಗೂ ಸೂದನ ಲಲಿತಾರವರು ಪ್ರಾರ್ಥಿಸಿದರು. ಗೀತಾ ನಂಗಾರು ಸ್ವಾಗತಿಸಿದರು , ಹಾಗೆ ಲೀಲಾವತಿ ತುಮ್ ತ್ತಜೆಯವರು ವಂದಿಸುವುದರೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.