ಕುಶಾಲನಗರ;ಮೌಲಾನಾ ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರ ವಿರೋಧ
ಕುಶಾಲನಗರ;ಪುರಸಭಾ ವ್ಯಾಪ್ತಿಗೊಳಪಡುವ ಬೈಚನಹಳ್ಳಿಯ ಆರ್ ಸಿ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ ತೆರೆಯಲು ಯೋಜಿಸಿರುವ ಮೌಲನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬಡಾವಣೆಗಳ ನಿವಾಸಿಗಳು ವಿರೋಧಿಸಿದ್ದಾರೆ.
ಬಡಾವಣೆಯ ನಿವಾಸಿಗಳು ಶ್ರಮದಾನ ಮಾಡುವ ಮೂಲಕ ಹಾಗೂ ಮನೆ ಮನೆಗಳಲ್ಲಿ ಹಣ ಸಂಗ್ರಹಿಸಿ ಸಮತಟ್ಟು ಹಾಗೂ ಸ್ವಚ್ಛವಾಗಿಟ್ಟುಕೊಂಡಿರುವ ವಿಶಾಲ ಉದ್ಯಾನದ ಜಾಗದ 45 ಸೆಂಟು ಜಾಗದಲ್ಲಿ ಶಾಲೆ ತೆರೆಯ ಹೊರಟಿರುವುದು ಅವೈಜ್ಞಾನಿಕವಾಗಿದೆ. ಏಕೆಂದರೆ ಸರ್ಕಾರದ ವತಿಯಿಂದ ನಿರ್ಮಾಣವಾಗುವ ಹೊಸ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ಅಟದ ಮೈದಾನ, ವಾಹನಗಳ ಪಾರ್ಕಿಂಗ್, ವಿಶಾಲವಾದ ರಸ್ತೆ ಹೀಗೆ ಮೂಲ ಸೌಕರ್ಯಗಳು ಇರಬೇಕು. ಆದರೆ ಕೊಡಗು ಅಲ್ಪಸಂಖ್ಯಾತ ಇಲಾಖೆ ಕಿಷ್ಕಿಂದೆಯಂತಿರುವ ಜಾಗದಲ್ಲಿ ಶಾಲೆ ತೆರೆಯಲು ಯೋಜಿಸಿರುವುದು ಸಮಂಜಸವಲ್ಲ ಎಂದು ಬಡಾವಣೆ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕಣಿವೆ ನಾಗೇಂದ್ರ ಉಪಾಧ್ಯಕ್ಷೆ ರಾಣಿ, ಕಾರ್ಯದರ್ಶಿ ಕಮಲ್, ಖಜಾಂಚಿ ನಾಗರಾಜು ಖಂಡಿಸಿದ್ದಾರೆ.
ಬಡಾವಣೆಯ ನಿವಾಸಿಗಳು ಒಂದೆಡೆ ಸೇರಿ ಸಭೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿ ಸಂಸದರು, ಶಾಸಕರು ಹಾಗೂ ತಾಲ್ಲೂಕು ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ದೇಶದ ಗಡಿಗಳಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅನೇಕ ಮಂದಿಯ ಮಾಜಿ ಸೈನಿಕರು ಇಲ್ಲಿ ಮನೆಗಳನ್ನು ನಿರ್ಮಿಸಿ ಶಾಂತಿ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಜೊತೆಗೆ ಬಡಾವಣೆಯಲ್ಲಿ ವಯೋ ವೃದ್ದರು ಹಾಗೂ ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರೆಲ್ಲದ ನೆಮ್ಮದಿಗೆ ಭಂಗ ವಾಗದ ರೀತಿಯಲ್ಲಿ ಉದ್ದೇಶಿತ ಶಾಲೆಯ ಕಟ್ಟಡ ಕಾಮಗಾರಿಯನ್ನು ಕೂಡಲೇ ಬೇರೆ ಜಾಗದಲ್ಲಿ ಆರಂಭಿಸಲಿ.
ಒಂದು ವೇಳೆ ಇಲಾಖೆ ಅಧಿಕಾರಿಗಳು,ನಿರ್ಲಕ್ಷ್ಯ ಧೋರಣೆ ಅನುಸರಿಸಿದಲ್ಲಿ ಒಗ್ಗಟ್ಟಿನ ಉಗ್ರ ಸ್ವರೂಪದ ಹೋರಾಟಕ್ಕೂ ಮುಂದಾಗುವುದಾಗಿ ನಾಗೇಂದ್ರ ಎಚ್ಚರಿಸಿದ್ದಾರೆ. ಸಭೆಯಲ್ಲಿ ಬಡಾವಣೆಯ ಪ್ರಮುಖರಾದ ವಕೀಲ ಜಗದೀಶ್, ಇಂಜಿನಿಯರ್ ಸಂದೀಪ್,ಚೈತ್ರ, ಪುಷ್ಪ, ಮಂಜು, ನಾಗಮಣಿ, ಸುರೇಖಾ, ಶ್ಯಾಮಲಾ ಮೊದಲಾದವರು ಇದ್ದರು..