ಕುಶಾಲನಗರ : ವರ್ಕ್ ಶಾಪ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ
ಕುಶಾಲನಗರ : ಪಟ್ಟಣದ ವರ್ಕ್ ಶಾಪ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನ ಹಾಗೂ ಸಂಘದ 16ನೇ ವಾರ್ಷಿಕೋತ್ಸವ ಶುಕ್ರವಾರ ಆಚರಿಸಲಾಯಿತು.
ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮವನ್ನು ಟೌನ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್ ಉದ್ಘಾಟಿಸಿ ಕಾರ್ಮಿಕ ದಿನದ ಮಹತ್ವದ ಬಗ್ಗೆ ಮಾತನಾಡಿ,ಕಾರ್ಮಿಕರು ಕಾನೂನಿನ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಡೆಸುವ ಹೋರಾಟಗಳ ಸಂದರ್ಭ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದರು.
ಪೊಲೀಸ್ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಕೂಡ ಕಾರ್ಮಿಕರಿಗಿಂತ ಮಿಗಿಲಾಗಿ ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ದುಡಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವರ್ಕ್ ಶಾಪ್ ಯೂನಿಯನ್ ಅಧ್ಯಕ್ಷ ಎಂ.ಆರ್.ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ಮೊದಲಿಗೆ ಕಾರ್ಮಿಕ ದಿನಾಚರಣೆ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಬಳಿಕ ಗಣಪತಿ ದೇವಾಲಯದ ಬಳಿ ಸಾಮೂಹಿಕವಾಗಿ ಪಟಾಕಿ ಸಿಡಿಸಿ ನಗರದಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭ ಟೌನ್ ಪೊಲೀಸ್ ಠಾಣಾಧಿಕಾರಿ ಎಚ್.ಟಿ. ಶಿವಣ್ಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ವರ್ಕ್ ಶಾಪ್ ಯೂನಿಯನ್ ಪದಾಧಿಕಾರಿಗಳಾದ ಸಿ.ಎನ್.ಮದನ್, ಶಿವಕುಮಾರ, ರಂಜಿತ್, ಸಮೀರ್, ವಿನ್ಸೆಂಟ್, ಎನ್.ಸಿ. ಗಣೇಶ್, ಸತೀಶ್, ರವಿ, ಮನು, ಗಣೇಶ್ ಪಾಲ್ಗೊಂಡಿದ್ದರು.