ಫಲಾನುಭವಿಗಳಿಗೆ ಮನೆ ನಿರ್ಮಿಸಲು, ಕಾಮಗಾರಿ ಆದೇಶ ಪತ್ರ ವಿತರಿಸಿದ ಶಾಸಕ ಎಎಸ್ ಪೊನ್ನಣ್ಣ

ಫಲಾನುಭವಿಗಳಿಗೆ ಮನೆ ನಿರ್ಮಿಸಲು, ಕಾಮಗಾರಿ ಆದೇಶ ಪತ್ರ ವಿತರಿಸಿದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ;ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ವಸತಿ ಯೋಜನೆಯ ಆಯ್ದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಲು, ಕಾಮಗಾರಿ ಆದೇಶ ಪತ್ರದ ವಿಚಾರಣೆ ಕಾರ್ಯಕ್ರಮ ಇಂದು ಮಡಿಕೇರಿಯಲ್ಲಿ ನಡೆಯಿತು.

ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಕ್ಷೇತ್ರಕ್ಕೆ ಒಳಪಡುವ ಮಡಿಕೇರಿ ತಾಲೂಕಿನ 18 ಪಂಚಾಯಿತಿಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸರ್ಕಾರದಿಂದ ಅನುದಾನ ಒದಗುತ್ತಿದ್ದು, ಮಡಿಕೇರಿ ತಾಲೂಕಿನ 18 ಪಂಚಾಯತ್ ವ್ಯಾಪ್ತಿಯ ಸುಮಾರು 400 ಕ್ಕೂ ಅಧಿಕ ಫಲಾನುಭವಿಗಳಿಗೆ ಇಂದು ಆದೇಶ ಪತ್ರವನ್ನು ವಿತರಿಸಿ ಮಾನ್ಯ ಶಾಸಕರು ಶುಭ ಕೋರಿದರು.

ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಪರವಾಗಿದ್ದು ಸದಾ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಗೌರವಯುತವಾಗಿ ಬಾಳ್ವೆ ನಡೆಸಲು ಬೇಕಾದ ಎಲ್ಲಾ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸುತ್ತಾ ಬಂದಿದೆ. ಪ್ರತಿಯೊಬ್ಬನಿಗೆ ಸೂರು ಅತ್ಯವಶ್ಯಕ ಎಂದು ಮನಗಂಡಿರುವ ರಾಜ್ಯ ಕಾಂಗ್ರೆಸ್ ಸರಕಾರವು, ಹಲವಾರು ಜನಪರ ಯೋಜನೆಗಳೊಂದಿಗೆ ವಸತಿ ನೀಡುವ ಯೋಜನೆಗೂ ಮಹತ್ವ ನೀಡಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಂಡು, ತಮ್ಮ ಅನುಕೂಲಕ್ಕನುಸಾರ ಮನೆ ನಿರ್ಮಿಸಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿಗಳು ಸೋಮಶೇಖರ್, ಜಿಲ್ಲಾ ಪಂಚಾಯತ್ ಸಿ ಇ ಓ ಆನಂದ್ ಪ್ರಕಾಶ್ ಮೀನಾ, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮಂದ್ರೀರ ಮೋಹನ್, ಮಡಿಕೇರಿ ತಾಲೂಕು ಅಭಿವೃದ್ಧಿ ಮತ್ತು ಯೋಜನೆಗಳ ಸಮಿತಿಯ ಉಪಾಧ್ಯಕ್ಷರು ಬಾಲಚಂದ್ರ ನಾಯರ್, ಕೊಡಗು ಜಿಲ್ಲಾ ಯೋಜನೆ ನಿರ್ದೇಶಕರು ಜೀವನ್ ಕುಮಾರ್, ತಾಲೂಕು ಇ ಓ ಶೇಖರ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷರು ರಫೀಕ್, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರು ಕಲಿಯಂಡ ಸಂಪನ್ ಅಯ್ಯಪ್ಪ, ಚೆಟ್ಟಿಮನಿ ಪಂಚಾಯಿತಿ ಮಾಜಿ ಸದಸ್ಯರು ಹ್ಯಾರೀಶ್, ಮೇಕೆರಿ ಪಂಚಾಯಿತಿ ಮಾಜಿ ಸದಸ್ಯರು ಹನೀಫ್, ಪ್ರಮುಖರು ಸೂರಜ್ ಹೊಸೂರು, ಆಪ್ರು ರವೀಂದ್ರ, ಪಿ ಎಲ್ ಸುರೇಶ್, ತುಳಸಿ ಗಾಂಧಿ ಪ್ರಸಾದ್, ಮಡಿಕೇರಿ ತಾಲೂಕು ಎಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳು, ಸದಸ್ಯರು, ಫಲಾನುಭವಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.