ಬುಡಕಟ್ಟು ದೇವರ ಉತ್ಸವಕ್ಕೆ ಶಾಸಕರಿಂದ ವೈಯುಕ್ತಿಕವಾಗಿ ಅನ್ನದಾಸೋಹ ಸೌಲಭ್ಯಗಳ ಕೊಡುಗೆ
ಪೊನ್ನಂಪೆಟೆ; ತಾಲೂಕಿನ ನಾಗರಹೊಳೆಯಲ್ಲಿರುವ ಶ್ರೀ ತಿರುಮಲ ಬರಗೂರು, ರಾಶೆ ಐಗೊಲ್ಲಿ ಜಾಡಲಿ ಬುಡಕಟ್ಟು ಜನಾಂಗದವರ ಆರಾಧ್ಯ ದೈವಸ್ಥಾನಕ್ಕೆ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಕಳೆದ ವರ್ಷದಲ್ಲಿ ಭೇಟಿ ನೀಡಿದ ಸಂದರ್ಭ ಆಶ್ವಾಸನೆ ನೀಡಿದಂತೆ, ಶ್ರೀ ದೇವರ ಅನ್ನದಾಸೋಹಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ವೈಯುಕ್ತಿಕವಾಗಿ ಕಲ್ಪಿಸಿ ಇಂದು ಸಮಿತಿಯವರಿಗೆ ಹತ್ತಾಂತರಿಸಿದರು.
ಶಾಸಕರ ಬೆಳ್ಳೂರು ನಿವಾಸದಲ್ಲಿ, ಆದಿವಾಸಿ ಮುಖಂಡರ ಸಮ್ಮುಖದಲ್ಲಿ ಈ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ಶಾಸಕರು, ಉತ್ಸವಗಳ ಸಂದರ್ಭದಲ್ಲಿ ಶ್ರೀದೇವರ ಅನ್ನದಾಸೋಹ ತಯಾರಿಕೆ ಬೇಕಾಗುವ ಎಲ್ಲಾ ರೀತಿಯ ಪಾತ್ರೆ-ಪಗಾಡೆಗಳು, ನೀರು ಶೇಖರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಮತ್ತು ಎಲ್ಲಾ ರೀತಿಯ ಅಡುಗೆ ಸಾಮಾಗ್ರಿಗಳನ್ನು ಒಳಗೊಂಡ ಸೌಲಭ್ಯಗಳನ್ನು ವೈಯುಕ್ತಿಕ ವೆಚ್ಚದಲ್ಲಿ ಖರೀದಿಸಿ, ದೇವರ ಉತ್ಸವ ಅತ್ಯಂತ ಸುಗಮವಾಗಿ ಸಾಗಲಿ ಎಂಬ ಉದ್ದೇಶದಿಂದ ಹಸ್ತಾಂತರಿಸುತ್ತಿರುವುದಾಗಿ ತಿಳಿಸಿದರು.
ಶ್ರೀದೇವರು ಎಲ್ಲರಿಗೂ ಆಶೀರ್ವದಿಸಲಿ ಹಾಗೂ ವಿಶೇಷವಾಗಿ ಬುಡಕಟ್ಟು ಜನಾಂಗದವರಿಗೆ ಉನ್ನತಿ ದೊರಕುವಂತೆ ಹಾರೈಸಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ರವರು, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಪಕ್ಷದ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.