ಮಡಿಕೇರಿ: ಶೂನ್ಯ ಬಡ್ಡಿದರಲ್ಲಿ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ : ಆರೋಪಿ ಬಂಧನ
ಮಡಿಕೇರಿ: ವಿವಿಧ ಸಂಸ್ಥೆಗಳಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಕಾಲೇಜು ಹಿಂಭಾಗದ ನಿವಾಸಿ ಇಂದುಮತಿ, ಮಂಗಳಾದೇವಿ ನಗರದ ನಿವಾಸಿಗಳಾದ ರೇಣುಕ, ರೇವತಿ ಹಾಗೂ ಶುಭಾ ಎಂಬುವರುಗಳಿಗೆ ಅಪ್ಪು ಕುಶಾನಿ ಫೈನಾನ್ಸ್ ಪ್ರೈ. ಲಿ.ನ ವೆಂಕಟೇಶ್ ಎಂಬಾತ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಎಂಪ್ಲಾಯಿಸ್ ಕೋ-ಆಪರೇಟಿವ್ ಸೊಸೈಟಿ ಲಿ. ಕೊಲ್ಕತ್ತಾ ಎಂಬ ಸಂಸ್ಥೆಯಿಂದ ರೂ. 10 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ, 3 ಫೋಟೊ ಹಾಗೂ 6 ಖಾಲಿ ಚೆಕ್ಗಳನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಪಡೆದುಕೊಂಡು ರೂ. 7952 ಗಳಂತೆ ಕಂತುಗಳ ರೂಪದಲ್ಲಿ ರೂ. 31,808 ಹಾಗೂ ಪ್ರೊಸೆಸಿಂಗ್ ಶುಲ್ಕ ರೂ. 3000 ಸೇರಿ ರೂ. 34808 ಪಡೆದುಕೊಂಡಿದ್ದಾನೆ. ನಂತರದಲ್ಲಿ ಕೊಡಿಸದೇ ಹಾಗೂ ಪಡೆದಿರುವ ಒಟ್ಟು ರೂ. 34808 ಹಣವನ್ನು ಹಿಂದಿರುಗಿಸದೇ ಮೋಸ ಮಾಡಿರುವ ಬಗ್ಗೆ ವೆಂಕಟೇಶ್ ಎಂಬಾತನ ಮೇಲೆ ಮಹಿಳೆಯರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡು ಡಿವೈಎಸ್ಪಿ ಸೂರಜ್ ಪಿ.ಎ, ವೃತ್ತ ನಿರೀಕ್ಷ ರಾಜು ಪಿ.ಕೆ. ನಗರ ಠಾಣಾಧಿಕಾರಿ ಅನ್ನಪೂರ್ಣ ಎಸ್.ಎಸ್ ಹಾಗೂ ರಾಧ, ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ನಗರದ ಗುಂಡುರಾವ್ ಬಡಾವಣೆ ನಿವಾಸಿ ವೆಂಕಟೇಶ್ ಎಂಬಾತನನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.