ಮಡಿಕೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

ಮಡಿಕೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

ಮಡಿಕೇರಿ:-ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವನ್ನಾಗಿ ನಿರ್ಮಿಸಿದ್ದರು, ಆದರೆ ಇಂದು ಬೆಂಗಳೂರು ಮಿತಿಮೀರಿ ಬೆಳೆದಿದ್ದು, ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

         ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

         ಕೆಂಪೇಗೌಡರು ಅಂದಿನ ಆಡಳಿತ ಅವಧಿಯಲ್ಲಿ ಬೆಂಗಳೂರು ಪ್ರಾಂತ್ಯದಲ್ಲಿ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಂಡಿದ್ದರು, ಆದರೆ ಇಂದು ಬೆಂಗಳೂರು ಹೆಚ್ಚಿನ ವೇಗದ ಬೆಳವಣಿಗೆಯಿಂದ ಸುಸ್ಥಿರ ಅಭಿವೃದ್ಧಿ ಆಗುತ್ತಿದೆಯೇ ಎಂಬ ಬಗ್ಗೆ ಯೋಚಿಸಬೇಕಿದೆ ಎಂದು ಶಾಸಕರು ನುಡಿದರು. 

          ಎಲ್ ನಿನೋ ಪರಿಣಾಮದಿಂದ ಮಳೆಯಾಗುತ್ತಿಲ್ಲ, ಎಲ್ಲೋ ಸಮುದ್ರ ಪ್ರದೇಶದಲ್ಲಿ ಎಲ್ ನಿನೋ ಆಗಿರುವುದಕ್ಕೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ, ಆದ್ದರಿಂದ ಕೆಂಪೇಗೌಡರ ದೂರದೃಷ್ಟಿ ಯಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಡಾ.ಮಂತರ್ ಗೌಡ ಅವರು ಸಲಹೆ ಮಾಡಿದರು. 

          ರಾಜ್ಯದ ಮಲೆನಾಡು ಭಾಗದಲ್ಲಿ, ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಇಡೀ ನಾಡಿಗೆ ಹಾಗೂ ದಕ್ಷಿಣ ಭಾರತಕ್ಕೆ ಸುಭಿಕ್ಷೆ ತರಲಿದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿಯಲ್ಲಿ ಶೇ.1 ರಷ್ಟು ಪಾಲನ್ನು ಕೊಡಗು ಜಿಲ್ಲೆಗೆ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಶಾಸಕರು ವಿವರಿಸಿದರು. 

      ಕೆಂಪೇಗೌಡರ ಜಯಂತಿಯನ್ನು ಒಕ್ಕಲಿಗರ ಸಂಘದಿಂದ ತಾಲ್ಲೂಕು ಮಟ್ಟದಲ್ಲಿಯೂ ಆಯೋಜಿಸುವಂತೆ ಶಾಸಕರು ಸಲಹೆ ಮಾಡಿದರು. 

       "ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲ್ಲೂಕು ಕೇಂದ್ರ ಕುಶಾಲನಗರದಲ್ಲಿ ಒಕ್ಕಲಿಗರ ಸಂಘಕ್ಕೆ ಜಾಗ ಒದಗಿಸುವುದು ಮತ್ತು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು, ಜತೆಗೆ ಸೋಮವಾರಪೇಟೆಯ ಒಕ್ಕಲಿಗರ ಸಂಘಕ್ಕೆ 50 ಲಕ್ಷ ರೂ ಅನುದಾನ, ಹಾಗೆಯೇ ಕುವೆಂಪು‌ ಶಾಲೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು, ಜತೆಗೆ ಕೊಡಗು ಗೌಡ ವಿದ್ಯಾ ಸಂಘಕ್ಕೆ 25 ಲಕ್ಷ ರೂ ಬಿಡುಗಡೆ ಮಾಡಿಸಲಾಗುವುದು, ಹಾಗೆಯೇ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಉದ್ಯಾನವನ‌ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು."

             ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ ಅವರು ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರಂತೆ ಪ್ರತಿಯೊಬ್ಬರಲ್ಲಿಯೂ ದೂರದೃಷ್ಟಿ ಇರಬೇಕು. ಈಗ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 32 ಶಾಸಕರು, ಹಲವರು ಎಂ.ಪಿಗಳು ಇದ್ದು ಅವರು ಬೆಂಗಳೂರು ಅಭಿವೃದ್ದಿಗೆ ಶ್ರಮಿಸಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ-ಗುಡ್ಡೆ ಹೊಸೂರು ರಾಷ್ಟ್ರೀಯ ಮಾರ್ಗದಲ್ಲಿ ಹೆದ್ದಾರಿ ಕೆಲಸ ನಡೆಯುತ್ತಿದ್ದು, ಗುಡ್ಡೆ ಹೊಸೂರಿನಿಂದ ಮಡಿಕೇರಿ ವರೆಗೆ ವಾಹನ ದಟ್ಟನೆ ಹೆಚ್ಚಾಗಿ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಯೋಚಿಸಬೇಕಿದೆ ಎಂದರು. 

       ಅರಣ್ಯವೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು. ಆ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಎಸ್.ಎಂ.ಚಂಗಪ್ಪ ಅವರು ಸಲಹೆ ಮಾಡಿದರು. 

        ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಂದೇ ಕಟ್ಟಡದಲ್ಲಿ ಎಲ್ಲಾ ಅಭಿವೃದ್ಧಿ ಇಲಾಖೆಗಳ ಕಚೇರಿಗಳು ಇರುವಂತಾಗಬೇಕು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಆಗಲಿದೆ. ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕು ಎಂದರು. 

     ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ್ ಕರಂದ್ಲಾಜೆ ಅವರು ಮಾತನಾಡಿ ಕೆಂಪೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ನಾಡನ್ನು ಕಟ್ಟಲು ಶ್ರಮಿಸಿದ್ದಾರೆ. ಇವರ ಪ್ರತಿಮೆಯನ್ನು ಮಡಿಕೇರಿ ಅಥವಾ ಕುಶಾಲನಗರದಲ್ಲಿ ನಿರ್ಮಿಸುವಂತಾಗಬೇಕು ಎಂದು ಕೋರಿದರು. 

        ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಕೊಡಗೆ ನೀಡಿದ್ದು, 63 ಪೇಟೆಗಳು, 300 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು. 

       ಬೆಂಗಳೂರು ಇಂದು ಅಂತರ ರಾಷ್ಟ್ರೀಯ ನಗರವಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಸ್ಥಾನ ಪಡೆಯುವಲ್ಲಿ ಕೆಂಪೇಗೌಡರ ದೂರದೃಷ್ಟಿ ಹೆಚ್ಚಾಗಿದೆ. ನಿಟ್ಟಿನಲ್ಲಿ ಕೆಂಪೇಗೌಡರನ್ನು ಸದಾ ಸ್ಮರಿಸುವಂತಾಗಬೇಕು, ಜತೆಗೆ ಮುಂದಾಲೋಚನೆಯೂ ಇರಬೇಕು ಎಂದರು. 

        ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಕೆಂಪೇಗೌಡರು 500 ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ದೂರದೃಷ್ಟಿಯ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿಗೆ ಚಾಲನೆ ನೀಡಿದ್ದರು ಎಂದರು. 

        ಹಲವು ಅಭಿವೃದ್ಧಿ ಹೊಂದಿದ ನಗರಗಳು ನದಿ ಹಾಗೂ ಸಮುದ್ರದ ಬಳಿ‌ ಇವೆ. ಆದರೆ ಬೆಂಗಳೂರು ನದಿ, ಸಮುದ್ರದ ಬಳಿ ಇಲ್ಲದೆಯೂ ಕೆಂಪೇಗೌಡರು ಕಟ್ಟಿದ ಕೆರೆ ಕಟ್ಟೆಗಳಿಂದ ಅಭಿವೃದ್ಧಿ ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದರು.

     ನಿವೃತ್ತ ಪ್ರಾಂಶುಪಾಲರಾದ ಸಿ.ಬಿ.ರಾಮಚಂದ್ರ ಅವರು ಮಾತನಾಡಿ ಕೆಂಪೇಗೌಡರ ಶಿಸ್ತು, ಸಮಯ ಪ್ರಜ್ಞೆ ಮತ್ತು ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ ಎಂದರು. 

     ಬ್ರಿಟಿಷರು ಬಾಂಬೆ, ಚೆನೈ, ಕೊಲ್ಕತ್ತ ಮತ್ತು ದೆಹಲಿಯನ್ನು ಅಭಿವೃದ್ಧಿ ಪಡಿಸಿದರು, ಅದಕ್ಕೂ ಮೊದಲು ರಾಜ ಮಹಾರಾಜರು ಹಲವು ನಗರ ಮತ್ತು ಪಟ್ಟಣವನ್ನು ಬೆಳಿಸಿದರು, ಆ ನಿಟ್ಟಿನಲ್ಲಿ ಕೆಂಪೇಗೌಡರು ಬೆಂಗಳೂರನ್ನೂ ಮಾದರಿ ಉದ್ಯಾನವನ ನಗರವಾಗಿ ನಿರ್ಮಿಸುವಲ್ಲಿ ಅಡಿಪಾಯಕ್ಕೆ ಚಾಲನೆ ನೀಡಿದ್ದರು ಎಂದು ರಾಮಚಂದ್ರ ಅವರು ವಿವರಿಸಿದರು. 

     ಕೆಂಪೇಗೌಡರು ಇಡೀ ಸಮಾಜಕ್ಕೆ ಮಾದರಿಯಾಗಿದ್ದು, ಕುರುಹು ತೋರಿದ ಪ್ರಭುಗಳು ಎಂದರೆ ತಪ್ಪಾಗಲಾರದು ಎಂದು ರಾಮಚಂದ್ರ ಅವರು ನುಡಿದರು.

     ಕೊಡಗು ಗೌಡ ಸಮಾಜದ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಡಿ.ಎಸ್.ಆನಂದ ಅವರು ಮಾತನಾಡಿ ಕೆಂಪೇಗೌಡರಂತೆ ಮುಂದಾಲೋಚನೆ ಇರಬೇಕು. ಕೆರೆಕಟ್ಟೆಗಳನ್ನು ಉಳಿಸಬೇಕು, ಗಿಡ ಮರಗಳನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು. 

    ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ವಿ.ಜಿ.ಮೋಹನ್ ಅವರು ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರು ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.

       ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್ ಅವರು ಮಾತನಾಡಿದರು. 

      ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಶಾಸಕರು ವಿತರಿಸಿದರು. 

      ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಪ್ರಮುಖರಾದ ಶಾಂತಳ್ಳಿ ಲೋಕೇಶ್, ಸೂರ್ತಲೆ ಸೋಮಣ್ಣ, ಗಣಿ ಪ್ರಸಾದ್, ವಿ.ಪಿ.ಸುರೇಶ್, ಅನಿಲ್ ಎಚ್.ಟಿ, ಶಿರಸ್ತೆದಾರರಾದ ದೇವರಾಜು ಇತರರು ಇದ್ದರು.

        ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.