ನಾಪೋಕ್ಲು: ಚೆರಿಯಪರಂಬುವಿನಲ್ಲಿ ಯುವಕನ ಮೇಲೆ ನಡೆದ ಗುಂಪುಹಲ್ಲೆ ಪ್ರಕರಣ; -ಆರು ಮಂದಿಯ ವಿರುದ್ಧ ಎಫ್. ಐ.ಆರ್ ದಾಖಲು

ನಾಪೋಕ್ಲು: ಚೆರಿಯಪರಂಬುವಿನಲ್ಲಿ ಯುವಕನ ಮೇಲೆ ನಡೆದ ಗುಂಪುಹಲ್ಲೆ ಪ್ರಕರಣ; -ಆರು ಮಂದಿಯ ವಿರುದ್ಧ ಎಫ್. ಐ.ಆರ್ ದಾಖಲು

ನಾಪೋಕ್ಲು :ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ನಡೆದ ಗುಂಪುಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಯುವಕರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದಿನಾಂಕ 20-04-2026ರಂದು ಮುಂಜಾನೆ ಎರಡು ಗಂಟೆಗೆ ಚೆರಿಯಪರಂಬು ಗ್ರಾಮದಲ್ಲಿ ಸ್ನೇಹಿತನೊಂದಿಗೆ ಎಮ್ಮೆಮಾಡು ಉರೂಸ್ ಗೆ ಬಂದಂತಹ ಶನಿವಾರ ಸಂತೆ ನಿವಾಸಿ ಅಬ್ದುಲ್ ರೆಹಮಾನ್ ಎಂಬ ಯುವಕನನ್ನು ಯುವಕರ ಗುಂಪೊಂದು ಗಂಭೀರವಾಗಿ ಹಲ್ಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಯ ಬಿಡಲಾಗಿತ್ತು.

ಹಲ್ಲೆಗೊಳಗಾದ ಯುವಕ ಶನಿವಾರ ಸಂತೆಯಲ್ಲಿರುವ ಪೋಷಕರ ಗಮನಕ್ಕೆ ತಂದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು.

 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ 1)ಕೊಟ್ಟಮುಡಿಯ ಅನೀಸ್,2)ಬೇತುಗ್ರಾಮದ ತೌಫೀಕ್,3)ಕೊಟ್ಟಮುಡಿಯ ಅಜ್ಮಲ್,4)ಎಮ್ಮೆಮಾಡುವಿನ ನಾಝಿಮ್,5)ಚೆರಿಯಪರಂಬುವಿನ ಸಹದ್ 6)ಶನಿವಾರ ಸಂತೆ ತ್ಯಾಗರಾಜ ಕಾಲೋನಿಯ ನೌಶಿಕ್ ಮತ್ತಿತರರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ನಡೆಸಿದ ತಂಡದಲ್ಲಿ ಇನ್ನೂ ಹಲವು ಯುವಕರು ಇದ್ದರು ಎನ್ನಲಾಗಿದೆ.ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಯುವಕನ ಮೇಲೆ ನಡೆದ ಗುಂಪು ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಂತೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪುಡಿ ರೌಡಿ,ಪುಂಡರ ಹಾವಳಿ ಜಾಸ್ತಿಯಾಗಿದೆ.

 ಪೊಲೀಸರು ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯ ಕೂಡ ಮಾಡಿದ್ದರು.ಹಲ್ಲೆ ನಡೆಸಿದ ಆರೋಪಿಗಳು ಈಗಾಗಲೇ ತಲೆಮರಿಸಿಕೊಂಡಿದ್ದು.ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.