ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಸಿದ್ದಾಪುರ :- ಪಾಲಿಬೆಟ್ಟ ಶಾಖೆಯ ಹಿಂದೂ ಮಲಯಾಳಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ವೈ. ಮುರುಳಿ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಸಮಾಜದ ಸದಸ್ಯರು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಸಮಾಜದ ಮೂಲಕ ಇನ್ನಷ್ಟು ಉತ್ತಮ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಶಾ ಮೋಹನ್ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಅಧ್ಯಕ್ಷ ಟಿ.ವೈ. ಮುರುಳಿ ಮಾತನಾಡಿ, ಸಮಾಜದ ಸದಸ್ಯರು ಒಗ್ಗೂಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸದಸ್ಯರ ಕುಟುಂಬಗಳಿಗೆ ಯಾವುದೇ ತೊಂದರೆ ಎದುರಾದಲ್ಲಿ ತಕ್ಷಣ ಸ್ಪಂದಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ನೂತನ ಆಡಳಿತ ಮಂಡಳಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಬಂಡೆ, ಖಜಾಂಚಿಯಾಗಿ ಮಧುಸೂದನ್, ಗೌರವ ಅಧ್ಯಕ್ಷರಾಗಿ ರಿನೀಶ್ ವಿ.ಬಿ., ಉಪಾಧ್ಯಕ್ಷರಾಗಿ ಸಾಯುಜ್ ಹಾಗೂ ಮಂಜುಳಾ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಮತ್ತು ನಿರ್ದೇಶಕರಾಗಿ ಶಶಿ ಎಂ.ಎಸ್., ಪ್ರಿಯಾ ಚಂದ್ರನ್, ಶೀಲಾ ಅನಿಲ್, ಸುರೇಂದ್ರ, ಅಖಿಲ್ ಎಂ.ಎ., ಗಂಗಾಧರ್ ಪಿ.ಕೆ., ನಳಿನಿ ದುರ್ಗಾ ಹಾಗೂ ಅಭಿನಂದನ್ ವಿ.ಪಿ. ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಸಿ.ಯು. ರಾಧಾಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶರತ್ ಕಾಂತ್, ಖಜಾಂಚಿ ಶಾಜಿ ಅಚ್ಯುತ್ತನ್, ಉಪಾಧ್ಯಕ್ಷೆ ಪುಷ್ಪಾ ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.