ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ಮುಂಬೈ, ಏಪ್ರಿಲ್ 27: ಅದು ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳ ಕುಟುಂಬ. ಶನಿವಾರ ರಾತ್ರಿ ವೀಕೆಂಡ್ ನೆಪದಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಅದಕ್ಕಾಗಿ ಬಿರಿಯಾನಿ ಮಾಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು. ಊಟ ಜಾಸ್ತಿಯಾಗಿದ್ದರಿಂದ ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು (Watermelon) ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.

ಹೀಗಾಗಿ, ತಮ್ಮ ಸ್ನೇಹಿತರಿಗೆ ಫೋನ್ ಮಾಡಿದ ಅವರು ಅವರ ಜೊತೆ ಆಸ್ಪತ್ರೆಗೆ ತೆರಳಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲರೂ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಈ ಘಟನೆ ಆತಂಕ ಮೂಡಿಸಿದೆ. ಫುಡ್ ಪಾಯಿಸನಿಂಗ್ನಿಂದ ಇಡೀ ಕುಟುಂಬ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಆದರೆ, ಅವರ ಆಹಾರದಲ್ಲಿ ವಿಷ ಸೇರಿದ್ದಾದರೂ ಹೇಗೆ? ಏಕೆಂದರೆ ಅವರು ತಿಂದ ಬಿರಿಯಾನಿಯನ್ನೇ ತಿಂದಿರುವ ಗೆಳೆಯರು ಆರೋಗ್ಯವಾಗಿದ್ದಾರೆ. ಹಾಗಾದರೆ, ಕಲ್ಲಂಗಡಿ ಹಣ್ಣಿನಿಂದ ವಿಷ ಅವರ ದೇಹ ಸೇರಿತಾ ಎಂಬ ಅನುಮಾನಗಳು ಮೂಡಿವೆ. ಇವೆಲ್ಲದಕ್ಕೂ ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.

ಈ ಘಟನೆ ಮುಂಬೈನ ಪೈಧುನಿ ಪ್ರದೇಶದಲ್ಲಿ ನಡೆದಿದ್ದು, 40 ವರ್ಷದ ಅಬ್ದುಲ್ಲಾ ದೋಕಾಡಿಯಾ, ಅವರ ಪತ್ನಿ ನಸ್ರೀನ್ ದೋಕಾಡಿಯಾ (35), ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರು ಏಪ್ರಿಲ್ 25ರಂದು ಗೆಳೆಯರು ಮತ್ತು ಸಂಬಂಧಿಕರನ್ನು ಮನೆಗೆ ಕರೆಸಿ ಒಟ್ಟಿಗೆ ಊಟ ಮಾಡಿದ್ದರು. ರಾತ್ರಿ 10.30ರ ಸುಮಾರಿಗೆ ಅತಿಥಿಗಳು ಹೊರಟುಹೋದರು. ನಂತರ ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಅವರು ಕಲ್ಲಂಗಡಿ ತಿಂದರು. ಬೆಳಗಿನ ಜಾವ 5-6 ಗಂಟೆಯ ಸುಮಾರಿಗೆ ಅವರು ವಾಂತಿ ಮತ್ತು ಹೊಟ್ಟೆ ನೋವಿನಿಂದ ನರಳಲಾರಂಭಿಸಿದರು.

ಏಪ್ರಿಲ್ 26 ರಂದು ಮುಂಜಾನೆ ಸುಮಾರು 5:30ರಿಂದ 6ರವರೆಗೆ ನಾಲ್ವರೂ ವಾಂತಿ ಮತ್ತು ಹೊಟ್ಟೆ ನೋವು ಸೇರಿದಂತೆ ತೀವ್ರ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರು. ಅವರಿಗೆ ಆರಂಭದಲ್ಲಿ ಕುಟುಂಬದ ವೈದ್ಯರು ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಯಿತು.

ಕಿರಿಯ ಮಗಳು ಭಾನುವಾರ ಬೆಳಿಗ್ಗೆ ಸುಮಾರು 10:15ಕ್ಕೆ ಸಾವನ್ನಪ್ಪಿದಳು. ಆಕೆಯ ಅಪ್ಪ ರಾತ್ರಿ 10.30ರ ಸುಮಾರಿಗೆ ನಿಧನರಾದರು. ಚಿಕಿತ್ಸೆಯ ಸಮಯದಲ್ಲಿ ಪತ್ನಿ ಮತ್ತು ಹಿರಿಯ ಮಗಳು ಸಹ ನಿಧನರಾದರು. ಈ ಘಟನೆಯ ಬಗ್ಗೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿಖರವಾದ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಆಹಾರ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ.