ಸಾವಿನ ಮುಂದೆ ರಾಜಕೀಯ ನಡೆಸುವುದು ಬಿಜೆಪಿ ಪಕ್ಷದವರ ಮನೋವಿಕಾರತೆಯಾಗಿದೆ: ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ
ಗೋಣಿಕೊಪ್ಪ: ಸಾವಿನ ಮುಂದೆ ರಾಜಕೀಯ ನಡೆಸುವುದು ಬಿಜೆಪಿ ಪಕ್ಷದವರ ಮನೋವಿಕಾರತೆಯಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಬಿಜೆಪಿಗರ ಪ್ರತಿಭಟನೆಯ ನಡೆಯನ್ನು ಟೀಕಿಸಿದ್ದಾರೆ.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪಕ್ಷಭೇದ ಮರೆತು ಸ್ಪಂದಿಸುವ ಮನೋಭಾವವನ್ನು ವೃದ್ಧಿಸಿಕೊಳ್ಳಲಿ.
ವಿನಾಕಾರಣ ಆಪಾದನೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಸಾದನೆಯಲ್ಲ ಎಂದು ತಿಳಿಸಿದರು.
ಕಳೆದ ೨೦ ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೊಡಗಿನ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇಂದಿಗೂ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಪಕ್ಷದ ಆಡಳಿತದಲ್ಲಿ ಬಗೆಹರಿಸಲಾಗದ ಸಮಸ್ಯೆಯನ್ನು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರುಗಳು ಬಗೆಹರಿಸಬೇಕು ಎಂಬ ನಿರೀಕ್ಷೆ ಹೊಂದುವುದು ಮೂರ್ಖತನವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅರಣ್ಯ ನೀತಿಯ ನಡುವೆ ಕೊಡಗಿನಲ್ಲಿ ಹುಲಿ ಹಿಡಿಯಲು ಮತ್ತು ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಶಾಸಕ ಪೊನ್ನಣ್ಣನವರು ಸಫಲತೆಯ ಕಾರ್ಯವನ್ನು ಮುಂದುವರಿಸಿದ್ದಾರೆ.
೨೦ ವರ್ಷಗಳಲ್ಲಿ ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ ಕನಿಷ್ಠ ಸಾಂತ್ವನ ಹೇಳಲು ಸಹ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು ಮುಂದಾಗಲಿಲ್ಲ ಎಂಬ ಆರೋಪಗಳಿವೆ. ಈ ವಿಚಾರವಾಗಿ ಸಾಕಷ್ಟು ಉದಾಹರಣೆಗಳು ಸಾಕ್ಷಿ ಸಮೇತ ಇವೆ ಎಂದು ಆರೋಪಿಸಿದ್ದಾರೆ.
ಶಾಸಕ ಪೊನ್ನಣ್ಣನವರು ವನ್ಯಪ್ರಾಣಿ ಮತ್ತು ಮನವ ಸಂಘರ್ಷದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಶಾಶ್ವತ ಪರಿಹಾರ ಕ್ರಮಕ್ಕೆ ಆಲೋಚನಪರರಾಗಿ ಹಲವು ಯೋಜನೆ ತಂದಿದ್ದಾರೆ.
ರೈಲ್ವೆ ಬ್ಯಾರಿಕೆಡ್ ಅಳವಾಡಿಕೆಗೆ ೨೦ ಕೋಟಿ ಅನುದಾನವನ್ನ ತಂದು ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿದ್ದಾರೆ. ತಕ್ಷಣವೇ ಹುಲಿಗಳನ್ನು ಹಿಡಿಯಲು ಮತ್ತು ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದಾರೆ. ಜತೆಗೆ ವನ್ಯ ಪ್ರಾಣಿಗಳ ಹಾವಳಿಯಿಂದ ಎದುರಾದ ಸಾವು ನೋವುಗಳಿಗೆ ಪರಿಹಾರವನ್ನು ತಕ್ಷಣ ಒದಗಿಸಲು ಸಹ ಜಾಗೃತ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಆದರೆ, ಮಾಜಿ ಶಾಸಕರುಗಳು ಕಳೆದ ೨೦ ವರ್ಷಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷಗಳ ಸಮಸ್ಯೆಗೆ ಕಂಡುಕೊಂಡ ಪರಿಹಾರ ಉಪಾಯಗಳನ್ನು ತಿಳಿಸಲಿ. ತಂದ ಅನುದಾನಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕೆ.ಜಿ ಬೋಪಯ್ಯ ಅವರಿಂದ ೨೦ ವರ್ಷಗಳಲ್ಲಿ ಆಗದ ಕಾರ್ಯವನ್ನು ಇದೀಗ ಕಾಂಗ್ರೆಸ್ ಸರ್ಕಾರ ಕೊಡಗಿನ ಸಮಸ್ಯೆಯನ್ನು ಬಗೆಹರಿಸಲು ಉತ್ತಮ ನಿಲುವನ್ನು ಹೊಂದಿ, ಆ ಪ್ರಯತ್ನಕ್ಕೆ ಹೆಜ್ಜೆಗಳನ್ನಾಗಿಸಿದೆ. ಪ್ರತಿಭಟನೆಯ ನೆಪದಲ್ಲಿ ಶಾಸಕರುಗಳಾದ ಪೊನ್ನಣ್ಣ ಮತ್ತು ಮಂತರ್ ಗೌಡ ಅವರನ್ನು ತೀವ್ರವಾಗಿ ವಿರೋಧಿಸುವ ಮನೋಸ್ಥಿತಿ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ಇಂದು ಬೀದಿ ನಾಯಿ ಹಿಡಿಯಲು ಸಹ ಒಂದು ಕಾನೂನಾತ್ಮಕ ಚೌಕಟ್ಟು ಇದೆ. ಆ ಹಿನ್ನೆಲೆಯಲ್ಲಿ ಹುಲಿ ಮತ್ತು ಆನೆಗಳನ್ನ ಹಿಡಿಯಲು ಸಹ ಕಾನೂನು ಬಿಗಿಯಾಗಿದೆ ಎಂಬುವುದು ಮಾಜಿ ಶಾಸಕರು ತಿಳಿದುಕೊಳ್ಳಬೇಕು.
ತಕ್ಷಣದ ಹೋರಾಟದಿಂದ ಯಾವುದೇ ಪ್ರತಿಫಲ ಇರುವುದಿಲ್ಲ. ಕೊಡಗಿನ ಸಮಸ್ಯೆಗಳನ್ನು ಬಗೆಹರಿಸುವ ಚಿಂತನೆ ಇದ್ದಲ್ಲಿ ಮತ್ತು ಈ ಕೊಡಗಿನ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಪಕ್ಷಭೇದ ಮರೆತು ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಲು ಬಿಜೆಪಿ ಶಾಸಕರು ಹಾಗೂ ಪಕ್ಷದ ಪ್ರಮುಖರು ಕೈಜೋಡಿಸಲಿ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೊಲ್ಲೀರ ಬೋಪಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರ ವಿರುದ್ಧ ಪ್ರತಿಭಟನೆ ಧಿಕ್ಕಾರ ಕೂಗುವುದು ಸರಿಯಾದ ವಿಚಾರವಲ್ಲ, ಶಾಸಕರಿಗೆ ಇರುವಷ್ಟೇ ಜವಾಬ್ದಾರಿ ಬಿಜೆಪಿಯ ಸಂಸದರಿಗೆ ಇರಬಲ್ಲದು ಎಂಬುದನ್ನು ಅರಿತುಕೊಳ್ಳಬೇಕು. ಜತೆಗೆ ಮಾಜಿ ಶಾಸಕರಿಗೂ ಈ ಜವಾಬ್ದಾರಿ ಇದೆ.
ಆರೋಪಗಳನ್ನ ಮಾಡುತ್ತ ಪ್ರತಿಭಟನೆ ನಡೆಸುವುದರಲ್ಲಿ ಕೊಡಗಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ಗಣಪತಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು ಉಪಸ್ಥಿತರಿದ್ದರು.
ಕಳೆದ ೨೦ ವರ್ಷಗಳ ವನ್ಯಪ್ರಾಣಿಗಳ ಸಂಘರ್ಷಕ್ಕೆ ಮಾನವ ಬಲಿಯಾದ ಅಂಕಿ ಅಂಶ ಮತ್ತು ಕಳೆದ ಮೂರು ವರ್ಷಗಳಲ್ಲಿ ಪರಿಹಾರಕ್ಕೆ ಅನುದಾನ ಒದಗಿಸಿದ ಮಾಹಿತಿ ಆದರಿತ ಪತ್ರಗಳನ್ನು ಕಾಂಗ್ರೆಸ್ನ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.