ಪೊನ್ನಂಪೇಟೆ:ಶಾಲೆಯಲ್ಲಿ ಅಯ್ಯಪ್ಪ ಮಾಲದಾರಿ ವಿದ್ಯಾರ್ಥಿನಿಯ ಮಾಲೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ
ಪೊನ್ನಂಪೇಟೆ:ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುವ ಸಲುವಾಗಿ ಮಾಲಾದಾರಿಯಾಗಿ ಶಾಲೆಗೆ ಬಂದಿದ್ದ ಪೊನ್ನಂಪೇಟೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ವ್ರತ ಮಾಲೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಬಲವಂತವಾಗಿ ಬಿಚ್ಚಿಸಿದ ಘಟನೆ ಸೋಮವಾರ (ದಿ 16)ನಡೆದಿದೆ.
ಇದರಿಂದ ಕೆರಳಿದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಶನಿವಾರ ದಿ.20ರಂದು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆಯಿತು.
ಈ ಶಾಲೆಯಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಸುಮಾರು 700ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಇಲ್ಲಿ ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪ್ರಾರ್ಥನೆ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ.
ಇಲ್ಲಿ ಸುಮಾರು 25ಕ್ಕೂ ಅಧಿಕ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ ಮತ್ತು10 ಬೋಧಕೇತರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಇದರಲ್ಲಿ ಕೇವಲ ಆರು ಶಿಕ್ಷಕರು ಮಾತ್ರ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೂ ಕೂಡ ಈ ಶಾಲೆಯಲ್ಲಿ ಯಾವುದೇ ಹಿಂದೂ ದೇವರ ಮತ್ತು ಮಹಾಪುರುಷರ ಪೋಟೋಗಳನ್ನು ಹಾಕದೆ ಕೇವಲ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಹಾಕಿರುವುದು ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಯಿತು. ಈ ಶಾಲೆಯಲ್ಲಿ ಹಿಂದೂ ಧರ್ಮದ ಹಬ್ಬ ಹರಿದಿನಗಳ ರಜೆಗಳನ್ನು ಕಡಿತ ಮಾಡುತ್ತಿದ್ದು,
ಇದರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪ್ರತಿಭಟನಾಕಾರರು ಪ್ರಶ್ನಿಸಿದಾಗ ಆಚಾತುರ್ಯದಿಂದ ಈ ಘಟನೆ ಸಂಭವಿಸಿದ್ದು ಇನ್ನು ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಯಾರಿಗೂ ನೋವಾಗದ ಹಾಗೆ ನಡೆದುಕೊಳ್ಳುವುದಾಗಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ.
ಘಟನಾ ಸಂದರ್ಭ ಮುಖಂಡರುಗಳಾದ ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಆಲೇಮಾಡ ನವೀನ್, ಸುಳ್ಳಿಮಾಡ ಸಂಪತ್, ಅಡ್ಡಂಡ ನಿಲನ್, ಪುತ್ತಾಮನೆ ಅನಿಲ್ ಪ್ರಸಾದ್, ವಿನು ಕೆ.ಬಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಕಾರ್ಯಕರ್ತರು ಹಾಜರಿದ್ದರು.