ವಿಶ್ವ ಹಿಂದು ಪರಿಷದ್ ಯುವ ಘಟಕ ಬಜರಂಗದಳದ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ
ಮಡಿಕೇರಿ: ವಿಶ್ವ ಹಿಂದು ಪರಿಷದ್ ಯುವ ಘಟಕ ಬಜರಂಗದಳದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಲವ್ ಜಿಹಾದ್ ಹಾಗೂ ಕಾರ್ಪೊರೇಟ್ ಜಿಹಾದ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ಲವ್ ಜಿಹಾದ್ ಮತ್ತು ನಾಸಿಕ್ನಲ್ಲಿ ಟಿಸಿಎಸ್ ಕಂಪೆನಿಯಲ್ಲಿ ಕಾರ್ಪೋರೇಟ್ ಜಿಹಾದ್ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿಯೂ ಲವ್ ಜಿಹಾದ್ ಪ್ರಕರಣ ನಡೆಯುತ್ತಿದ್ದರು ಪೊಲೀಸ್ ಇಲಾಖೆ ಗಮನ ಹರಿಸುತ್ತಿಲ್ಲ. ಹಿಂದೂ ಸಂಘಟನೆಗಳು ದೂರು ನೀಡಿದ ನಂತರ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂದು ಕಾರ್ಯಕರ್ತರು ದೂರಿದರು.
ರಾಜ್ಯದ ಎಲ್ಲಾ ಖಾಸಗಿ ಸಂಸ್ಥೆಗಳ ವಿರುದ್ಧ ನೀಡಿದ ದೂರುಗಳನ್ನು ಪರಿಶೀಲನೆ ಮಾಡಿ ಮತಾಂತರ ಸಂಬಂಧಿತ ಕಿರುಕುಳ ಕೇಸ್ಗಳನ್ನು ಮರು ತೆರೆಯಬೇಕು. ಕಾಣೆಯಾದ ಹಿಂದೂ ಯುವತಿಯರ ಪತ್ತೆಗಾಗಿ ವಿಶೇಷ ಆಂಟಿ ಹೂಮನ್ ಟ್ರಾಫಿಕಿಂಗ್ ಯೂನಿಟ್ ರಚಿಸಿ ಈ ಜಿಹಾದ್ ಜಾಲದ ಜೊತೆ ಲಿಂಕ್ ಇದೆಯೇ ಎಂದು ತನಿಖೆ ಮಾಡಬೇಕು. ಸಂತ್ರಸ್ತ ಮಹಿಳೆಯರ ಗುರುತು ಗೌಪ್ಯವಾಗಿಟ್ಟು, ಉಚಿತ ಕಾನೂನು ನೆರವು, ಕೌನ್ಸಲಿಂಗ್ ಮತ್ತು ಉದ್ಯೋಗ ನೀಡಲು ಧರ್ಮರಕ್ಷಾ ನಿಧಿ ಸ್ಥಾಪಿಸಬೇಕು. ಎಲ್ಲಾ ಜಿಮ್ ಮತ್ತು ಕೋಚಿಂಗ್ಗಳ ಮೇಲೆ ನಿಗಾ ಇಟ್ಟು, ಇವುಗಳ ಕಡ್ಡಾಯ ನೋಂದಣಿ, ಸಿಸಿ ಟಿವಿ ಆಳವಡಿಕೆ, ಮಹಿಳಾ ತರಬೇತಿದಾರರ ನೇಮಕಾತಿ ಕಡ್ಡಾಯ ಮಾಡಿ, ತಪಾಸಣೆ ನಡೆಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ವಿಹಿಂಪ ಜಿಲ್ಲಾ ಅಧ್ಯಕ್ಷ ರಮೇಶ್ ಪುದಿಯೊಕ್ಕಡ, ಕಾರ್ಯದರ್ಶಿ ಸಂತೋಷ್, ಚೇತನ್ ಶಾಂತಿನಿಕೇತನ, ಬಜರಂಗದಳ ಸಂಯೋಜಕ ವಿನಯ್ ಕುಮಾರ್, ಸಹ ಸಂಯೋಜಕ ದುರ್ಗೇಶ್ ಭಜರಂಗಿ, ಮುಕುಂದ್, ನಗರ ಸಂಯೋಜಕ ಚರಣ್ ಕುಮಾರ್, ಸೇರಿ ಹಿಂದೂ ಪರ ಸಂಘಟನೆಯ ಹಾಗೂ ಭಾಜಪಾ ಕಾರ್ಯಕರ್ತರು ಹಾಜರಿದ್ದರು.