ಸಿದ್ದಾಪುರ;ಕಾವೇರಿ ಸೇತುವೆ ಬಳಿ ಕಸ ಬಿಸಾಡಿದ ವ್ಯಕ್ತಿಗೆ ದಂಡ ಕ್ಯಾಮೆರಾದಲ್ಲಿ ಸೆರೆ
ಸಿದ್ದಾಪುರ;ಕಾವೇರಿ ನದಿ ಸೇತುವೆ ಸಮೀಪ ಕಸ ಬಿಸಾಡಿದ ನೆಲ್ಯಹುದಿಕೇರಿ ಗ್ರಾಮದ ಹಂಸ ಎಂಬ ವ್ಯಕ್ತಿಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ದಂಡ ವಿಧಿಸಿದೆ.
ಸಿದ್ದಾಪುರ–ಮಡಿಕೇರಿ ಸಂಪರ್ಕ ರಸ್ತೆಯಲ್ಲಿರುವ ಕಾವೇರಿ ಸೇತುವೆ ಬಳಿ ಅಕ್ರಮವಾಗಿ ತ್ಯಾಜ್ಯ ಬಿಸಾಡುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ, ಹಂಸ ಎಂಬ ವ್ಯಕ್ತಿ ಕಸವನ್ನು ತಂದು ಸುರಿಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿವೆ.
ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು ಸಂಬಂಧಿತ ವ್ಯಕ್ತಿಗೆ ದಂಡ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನದಿ ತೀರದಲ್ಲಿ ತ್ಯಾಜ್ಯ ಬಿಸಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪಂಚಾಯಿತಿ ಆಡಳಿತ ಎಚ್ಚರಿಕೆ ನೀಡಿದೆ. ಪವಿತ್ರ ಕಾವೇರಿ ನದಿ ತೀರದಲ್ಲಿ ಕಸ ಸುರಿದು ಪರಿಸರ ಮಾಲಿನ್ಯ ಉಂಟುಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ಹಾಗೂ ಡೊಮಿನೊಸ್ ಸಂಘ ನೆಲ್ಯಹುದಿಕೇರಿ,ತಿಳಿಸಿದ್ದಾರೆ. ಸಾರ್ವಜನಿಕರು ಪರಿಸರ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.