ಸಿದ್ದರಾಮಯ್ಯ–ಡಿಕೆಶಿ ಭಿನ್ನಾಭಿಪ್ರಾಯಕ್ಕೆ ತೆರೆ: “ನಮ್ಮ ನಡುವೆ ಯಾವುದೇ ಗೊಂದಲವಿಲ್ಲ” – ಸಿಎಂ ಸ್ಪಷ್ಟನೆ
ಬೆಂಗಳೂರು, ನ.29: ರಾಜ್ಯದ ನಾಯಕತ್ವದ ಬಿಕ್ಕಟ್ಟಿನ ಸುತ್ತಲಿನ ಊಹಾಪೋಹಗಳಿಗೆ ಅಂತ್ಯ ಹಾಕುವ ಪ್ರಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಖಡಕ್ ಹೇಳಿಕೆ ನೀಡಿದ್ದಾರೆ.
ಹೈಕಮಾಂಡ್ ಸೂಚನೆಯ ಮೇರೆಗೆ ಇಬ್ಬರು ನಾಯಕರು ಶನಿವಾರ ಬೆಳಗ್ಗೆ ಉಪಹಾರ ಕೂಟದಲ್ಲಿ ಮುಖಾಮುಖಿ ಮಾತುಕತೆ ನಡೆಸಿದ ಬಳಿಕ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು. “ರಾಜ್ಯದಲ್ಲಿ ಅನಗತ್ಯ ಗೊಂದಲವನ್ನು ಯಾರ ಸೃಷ್ಟಿಸುತ್ತಿದ್ದಾರೆ. 2028ರ ವಿಧಾನಸಭಾ ಚುನಾವಣೆ ನಮ್ಮ ಮುಂದಿರುವ ಪ್ರಮುಖ ಗುರಿ. ನನ್ನ ಮತ್ತು ಡಿಕೆಶಿ ನಡುವೆ ಈಗಲೂ ಭೇದಾಭಿಪ್ರಾಯವಿಲ್ಲ; ಮುಂದೆಯೂ ಇರುವ ಮಾತೇ ಇಲ್ಲ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
“ಪಕ್ಷದ ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನಾಳೆಯಿಂದ ಯಾವುದೇ ಗೊಂದಲ ರಾಜ್ಯದಲ್ಲಿ ಮುಂದುವರಿಯುವುದಿಲ್ಲ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.