ಸೋಮವಾರಪೇಟೆ; ತಾಲ್ಲೂಕು ಮಟ್ಟದ ಪ್ರತಿಭಾನ್ವೇಷಣೆ ಸ್ಪರ್ಧೆ
ಸೋಮವಾರಪೇಟೆ: ವಿದ್ಯಾರ್ಥಿ ಜೀವನದಲ್ಲಿ ಉನ್ನತ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಂದು ವಿಷಯವನ್ನು ಅಳವನ್ನು ಅಭ್ಯಾಸ ಮಾಡಬೇಕು ಎಂದು ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಹೇಳಿದರು.
ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಪ್ರೇರಣಾತ್ಮಕ ಭಾಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನಕ್ಕೆ ಒಂದು ಗಂಟೆ ದಿನಪ್ರತಿಕೆಗಳನ್ನು ಓದುವ ವಿದ್ಯಾರ್ಥಿಗಳು ಸಿಗುವುದು ಅಪರೂಪ ಆದರೆ ಪ್ರತಿದಿನ ವ್ಯಾಟ್ಸಪ್, ಇನ್ಸ್ಟಾಗ್ರಾಂವನ್ನು ನೋಡುವ ವಿದ್ಯಾರ್ಥಿಗಳು ಜಾಸ್ತಿಯಿದ್ದಾರೆ. ಆನ್ಲೈನ್ ಓದು ಒಳ್ಳೆಯದಕ್ಕೆ ಬಳಸಬೇಕು ಎಂದು ಕಿವಿಮಾತು ಹೇಳಿದರು. ಇಂದು ಕೃತಕ ಬುದ್ಧಿಮತ್ತೆ ಯುಗವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ, ಕೌಶಲ್ಯ ಮತ್ತು ಸೃಜನಾತ್ಮಕತೆ ಇಲ್ಲದೆ ವಿದ್ಯಾರ್ಥಿಗಳು ಮುನ್ನಡೆಯಲು ಸಾಧ್ಯವಿಲ್ಲ ಎಂದು ಗ್ರಾಮೀಣ ಮಕ್ಕಳಿಗೆ ಕಷ್ಟಗಳಿವೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಓದುವುದನ್ನು ಎಂದಿಗೂ ನಿಲ್ಲಿಸಬಾರದು.
ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಶಿಕ್ಷಣ ಮುಂದುವರಿಸಬೇಕು. ಓದಿನ ಜೊತೆಗೆ ಸೃಜನಶೀಲತೆ ಬೆಳೆಸಿಕೊಳ್ಳುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ತಿಳಿಸಿದರು. ಓದೋ ಮಕ್ಕಳಿಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಇತಿಹಾಸದಲ್ಲೇ ನೋಡಿದರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರೇ ಆಗಿದ್ದಾರೆ. ಕೆಲವೊಮ್ಮೆ ಬಡತನವೇ ಓದಿಗೆ ಪ್ರೇರಣೆಯಾಗಿ, ಸಾಧನೆಯ ಮೆಟ್ಟಿಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಿಮಗೆ ನೀವೇ ನಿಮ್ಮ ರೋಲ್ ಮಾಡೆಲ್ಗಳು. ಅವಕಾಶಗಳು ಇಂದು ಸಾಕಷ್ಟಿವೆ. ಆದರೆ ಕಲಿಕೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರೆ, ಮುಂದೆ ಬರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಶೇಷವಾಗಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳು ಅತ್ಯಂತ ಶ್ರದ್ಧೆಯಿಂದ, ಗುರಿ ಸಾಧನೆಗಾಗಿ ಓದಲೇಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಶಿಕ್ಷಣವೇ ಸಮಾಜದ ಬೆಳವಣಿಗೆಗೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಅಧ್ಯಯನ ಮಾಡಿ ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಭಾತ್ಮಿದಾರ ಕೆ.ಎಂ. ಜಗದೀಶ್ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೆಡ್ ಗೊನ್ಸಾಲ್ವೆಸ್ ಮಾತನಾಡಿ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ತಿಳಿಸಿದರು.
ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಎಚ್.ಆರ್.ಜೀವಿತ, ಭಗತ್, ವಾಣಿಜ್ಯ ವಿಭಾಗದಲ್ಲಿ ಸಿ.ಇ.ಆಶಿತ್, ಕೆ.ಎಸ್.ಮೊನಿಷಾ, ಅತೀ ಹೆಚ್ಚು ಅಂಕಪಡೆದವರ ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಇಬ್ಬನಿ, ಪವನ್, ವಾಣಿಜ್ಯ ವಿಭಾಗದಲ್ಲಿ ಮೊನಿಷಾ ಜಿ.ಜಿ. ಭುವನೇಶ್ ಪಡೆದುಕೊಂಡರು. ಆಲ್ರೌಂಡರ್ ಪ್ರಶಸ್ತಿಯನ್ನು ವಾಣಿಜ್ಯ ವಿಭಾಗದ ಹನಿ ಪಡೆದುಕೊಂಡರು. ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ಬಿ.ಜಿ.ವೈಭವಿ, ಅಸೀನಾ, ಎಚ್.ಆರ್.ದಿಶಿತಾ, ಸಿ.ಎಚ್.ಭೂಮಿಕ, ಉಪನ್ಯಾಸಕಿಯರಾದ ಅಪಾಡಂಡ ಮೌನ, ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸಕೃತಿಕ ಕಾರ್ಯಕ್ರಮ ನಡೆಯಿತು.