ಸೋಮವಾರಪೇಟೆ: ಮೀಸಲು ಅರಣ್ಯದಲ್ಲಿ ಬೇಟೆಗೆ ಯತ್ನ-ಕೋವಿ ಸಹಿತ ಮೂವರ ಬಂಧನ

ಸೋಮವಾರಪೇಟೆ: ಮೀಸಲು ಅರಣ್ಯದಲ್ಲಿ ಬೇಟೆಗೆ ಯತ್ನ-ಕೋವಿ ಸಹಿತ ಮೂವರ ಬಂಧನ

ಸೋಮವಾರಪೇಟೆ: ಸೋಮವಾರಪೇಟೆ ವಲಯಕ್ಕೆ ಒಳಪಡುವ ಬಾಣಾವರ ಶಾಖಾ ವ್ಯಾಪ್ತಿಯ, ನಿಡ್ತ ಮೀಸಲು ಅರಣ್ಯದ ಭುವಂಗಾಲ ಬಳಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರನ್ನು ಕೋವಿ ಸಹಿತ ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

 ಭುವಂಗಾಲ ಬಸ್ ನಿಲ್ದಾಣ ಸಮೀಪದ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾರನ್ನು ನಿಲ್ಲಿಸಿ, ತಲೆಗೆ ಹೆಡ್ ಟಾರ್ಚ್ ಹಾಕಿಕೊಂಡು, ಕೋವಿ ಹಿಡಿದು ಬೇಟೆಗೆ ಯತ್ನಿಸುತ್ತಿದ್ದ ಆರೋಪದ ಮೇರೆ ಪಟ್ಟಣ ಸಮೀಪದ ಯಡೂರು ಗ್ರಾಮದ ಭಾನುಪ್ರಕಾಶ್, ಭರತ್, ಚಿನ್ನಪ್ಪ ಅವರುಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

 ಬಂಧಿತರಿಂದ ಮೂರು ಕೋವಿಗಳು, 13 ಕಾಡತೂಸು, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಹೆಡ್ ಟಾರ್ಚ್ಗಳನ್ನು ವಶಕ್ಕೆ ಪಡೆದಿದ್ದು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಸಿಎಫ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ಶೈಲೇಂದ್ರ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಶ್ರವಣಕುಮಾರ್ ವಿಭೂತಿ, ಗಸ್ತು ಅರಣ್ಯ ಪಾಲಕ ಈರಣ್ಣ ಹಕ್ಕಿ, ಗಸ್ತು ಅರಣ್ಯ ವೀಕ್ಷಕ ವೆಂಕಟೇಶ್ ಬಸವರಾಜ್ ದಳವಾಯಿ, ಪ್ರವೀಣ್, ಸಿಬ್ಬಂದಿಗಳಾದ ರಂಜಿತ್‌ಕುಮಾರ್, ಸಂಜಯ್, ನಾಗರಾಜ್, ಸಂತೋಷ್ ಅವರುಗಳು ಭಾಗಿಯಾಗಿದ್ದರು.