ಎಸ್ಎಸ್ಎಲ್.ಸಿ‌ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣ ಕಾರ್ಯಾಗಾರ; ಪರೀಕ್ಷೆಯನ್ನು ಯಾವುದೇ ಒತ್ತಡಗಳಿಲ್ಲದೆ ಎದುರಿಸಬೇಕು;‌ಶಾಸಕ‌ ಎಎಸ್ ಪೊನ್ನಣ್ಣ

ಎಸ್ಎಸ್ಎಲ್.ಸಿ‌ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣ ಕಾರ್ಯಾಗಾರ; ಪರೀಕ್ಷೆಯನ್ನು ಯಾವುದೇ ಒತ್ತಡಗಳಿಲ್ಲದೆ ಎದುರಿಸಬೇಕು;‌ಶಾಸಕ‌ ಎಎಸ್ ಪೊನ್ನಣ್ಣ

ಪೊನ್ನಂಪೇಟೆ;ಈ ಬಾರಿಯ ಎಸ್​ಎಸ್​ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ, ವಿಶೇಷ ಪ್ರೇರಣ ಕಾರ್ಯಗಾರದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು.

ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಈ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಗಾರದಲ್ಲಿ ಉಪಸ್ಥಿತರಿದ್ದ ಎಸ್​ಎಸ್​ಎಲ್ ಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ವಿದ್ಯಾರ್ಥಿಯ ಮುಂದಿನ ಭವಿಷ್ಯವನ್ನು ರೂಪಿಸಲು ಈ ಪರೀಕ್ಷೆಯು ಒಂದು ವೇದಿಕೆಯನ್ನು ನಿರ್ಮಾಣ ಮಾಡುತ್ತದೆ. ಎಸ್ ಎಸ್ ಎಲ್ ಸಿ ಮುಗಿದೊಡನೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಆಯ್ಕೆಗಳನ್ನು ನಿರ್ಧರಿಸುತ್ತಾರೆ.

ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಎದುರು ಹಲವಾರು ಆಯ್ಕೆಗಳು ಇವೆ. ಅದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತನಗೆ ಇಷ್ಟವಾದ ಹಾಗೂ ತಾನು ಸಾಧಿಸಬಲ್ಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಂತಹ ಕ್ಷೇತ್ರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಯಶಸ್ಸು ಕಾಣುವಂತಾಗಲಿ ಎಂದು ಹಾರೈಸಿದರು.

ಪರೀಕ್ಷೆ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಒಂದು ಭಾಗವಾಗಿದೆ. ಆದ್ದರಿಂದ ಪರೀಕ್ಷೆಯನ್ನು ಯಾವುದೇ ಒತ್ತಡಗಳಿಲ್ಲದೆ ಎದುರಿಸಬೇಕು ಹಾಗೂ ಅದರಲ್ಲಿ ಯಶಸ್ಸು ಕಾಣಲು ಏಕಾಗ್ರತೆಯಿಂದ ಪಾಠವನ್ನು ಕೇಳಿ ಅದನ್ನು ನೆನಪಿನಲ್ಲಿಟ್ಟುಕೊಂಡರೆ ಪರೀಕ್ಷೆ ಎಂಬುದು ಸುಲಭ ಸಾಧ್ಯ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಯಶಸ್ಸು ಆಗಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಶ್ರೀ ಶ್ರೀ ಶ್ರೀ ಪರಹಿತನಂದ ಸ್ವಾಮೀಜಿ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.