ತೊರೆನೂರು ಗ್ರಾಮದಲ್ಲಿ ಜಾತ್ರೋತ್ಸವದ ಅಂಗವಾಗಿ ಕ್ರೀಡಾಕೂಟ; ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ; ಶಾಸಕ ಡಾ ಮಂತರ್ ಗೌಡ ಕರೆ
ಕುಶಾಲನಗರ, ಮೇ.21: ಗ್ರಾಮೀಣ ಕ್ರೀಡಾ ಸಂಸ್ಕೃತಿಯು ಗ್ರಾಮೀಣ ಕ್ರೀಡಾ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ ಒದಗಿಸುತ್ತವೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಗ್ರಾಮೀಣ ಕ್ರೀಡಾ ಪ್ರತಿಭೆ ಹಾಗೂ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಹೇಳಿದರು.
ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವಿಯ ಗ್ರಾಮ ದೇವತೆ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಹಳ್ಳಿಗಳಲ್ಲಿ ಸಾಂಪ್ರದಾಯಿಕ ಜೀವನದ ಅವಿಭಾಜ್ಯ ಅಂಗವಾಗಿವೆ. ಈ ದಿಸೆಯಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದರು.
ಗ್ರಾಮಗಳಲ್ಲಿ ದೇವರ ಉತ್ಸವ ಮತ್ತು ಹಬ್ಬ ಹರಿದಿನಗಳ ಪ್ರಯುಕ್ತ ಸಂಘ-ಸಂಸ್ಥೆಗಳಿಂದ ನಡೆಸುವ ಕ್ರೀಡೆಗಳನ್ನು ಎಲ್ಲರೂ ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು.ಈ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಗ್ರಾಮೀಣ ಕ್ರೀಡೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ತಮ್ಮೊಂದಿಗೆ ಸದಾ ಇರುತ್ತೇನೆ. ಹಬ್ಬ ಹರಿದಿನ ದೇವಸ್ಥಾನ, ರಸ್ತೆ ಹಾಗೂ ಇನ್ನಿತರ ಅಗತ್ಯ ಕಾಮಗಾರಿಗಳ ಅಭಿವೃದ್ಧಿ ಮತ್ತು ಗ್ರಾಮದಲ್ಲಿ ಸಾಮರಸ್ಯದ ಬದುಕಿಗೆ ಬೇಕಿರುವ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತೇನೆ ಎಂದು ಶಾಸಕ ಡಾ ಮಂತರ್ ಗೌಡ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕ್ರೀಡೆಯಲ್ಲಿಸೋಲು ಗೆಲುವು ಇರುವುದು ಸಹಜ. ಇದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಕ್ರೀಡೆಯು ದೈಹಿಕ, ಮಾನಸಿಕ ಸದೃಢತೆಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಗ್ರಾಮೀಣ ಹಬ್ಬ ಹರಿದಿನಗಳು ನಮ್ಮ ಜನಪದೀಯರು ಚಾಚು ತಪ್ಪದೇ ನಡೆಸಿಕೊಂಡು ಬಂದ ಗ್ರಾಮೀಣ ಸಂಸ್ಕೃತಿ ಸೊಗಡಿನ ಪ್ರತೀಕವಾಗಿವೆ. ಕ್ರೀಡೆಗಳು ಹಳ್ಳಿಗಳಲ್ಲಿ ಸಾಂಪ್ರದಾಯಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದರು. ಗ್ರಾಮದಲ್ಲಿ ಯುವಜನಾಂಗವು ಹಿರಿಯರ ಮಾರ್ಗದರ್ಶನದಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಬದುಕು ನಡೆಸುವ ಮೂಲಕ ಗ್ರಾಮದ ಐಕ್ಯತೆ ಎತ್ತಿ ಹಿಡಿಯಬೇಕು ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸೌಹಾರ್ದತೆ ಸಂದೇಶ ನೀಡುವುದೇ ಕ್ರೀಡೆಯ ಉದ್ದೇಶವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಟ್ರಸ್ಟ್ ನ ಅಧ್ಯಕ್ಷ ಟಿ.ಬಿ.ಜಗದೀಶ್ ಮಾತನಾಡಿ, ಗ್ರಾಮದಲ್ಲಿ ಗ್ರಾಮದೇವತೆ ಹಬ್ಬವನ್ನು ಆಚರಿಸುವ ಮೂಲಕ ಗ್ರಾಮದಲ್ಲಿ ಒಗ್ಗಟ್ಟು ಹಾಗೂ ಸೌಹಾರ್ದತೆ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು.
ಉದ್ಯಮಿ ಹೆಬ್ಬಾಲೆಯ ಎಚ್.ಕೆ ನಟೇಶ್ ಗೌಡ ಮಾತನಾಡಿ, ಯುವಕರು ಕ್ರೀಡಾಸ್ಪೂರ್ತಿ ಬೆಳೆಸಿಕೊಂಡು ಶಿಸ್ತು, ಸಮನ್ವಯತೆ ಕಾಪಾಡಿಕೊಳ್ಳಬೇಕು ಎಂದರು. ಇದೇ ವೇಳೆ ಅಂತರಾಷ್ಟ್ರೀಯ ಮೆರಥಾನ್ ಕ್ರೀಡಾಪಟು ತೊರೆನೂರು ಗ್ರಾಮದ ಟಿ.ಎಚ್.ಗಣೇಶ್ ಅವರನ್ನು ಗ್ರಾಮದ ಕ್ರೀಡಾ ಸಮಿತಿಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಿ.ಡಿ.ಅಣ್ಣಯ್ಯ , ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಕೆ.ಎಸ್.ಕೃಷ್ಣೇಗೌಡ, , ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಟಿ.ಕೆ.ಬಸವರಾಜ್, ದೇವಸ್ಥಾನ ಸಮಿತಿ ಟ್ರಸ್ಟ್ ನ ಕಾರ್ಯಾಧ್ಯಕ್ಷ ಟಿ.ಜಿ.ಶಿವಣ್ಣ, ಉಪಾಧ್ಯಕ್ಷ ಟಿ.ಬಿ.ಚಿದಾನಂದ, ನಿರ್ದೇಶಕರಾದ ಟಿ.ಸಿ.ತ್ರಿಣೇಶ್, ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ರವಿ, ಪಿಡಿಓ ಶ್ಯಾಮ್, ಕೂಡಿಗೆ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ ಅನಂತ, ಕ್ರೀಡಾ ಸಮಿತಿಯ ಅಧ್ಯಕ್ಷ ಟಿ.ಎ.ರವಿಚಂದ್ರ, ಉಪಾಧ್ಯಕ್ಷ ಟಿ.ಎಚ್.ಲೋಕೇಶ್, ನಿರ್ದೇಶಕರಾದ ವಕೀಲ ಟಿ.ಜೆ.ಪ್ರವೀಣ್, ಟಿ.ಆರ್. ಉಮೇಶ್, , ಶಿಕ್ಷಕ ಟಿ.ಜಿ.ರಮೇಶ್, ಟಿ.ಆರ್.ದಿನೇಶ್, ಟಿ.ಎಸ್.ಮಹೇಶ್, ಮೆರಾಥನ್ ಕ್ರೀಡಾಪಟು ಟಿ.ಎಚ್.ಗಣೇಶ್ , ಕ್ರೀಡಾ ಸಮಿತಿಯ ಪದಾಧಿಕಾರಿಗಳು, ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.
