ವಿವಾಹಿತೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಶಂಕೆ: ಯಶವಂತಪುರದಲ್ಲಿ ಯುವಕನ ಥಳಿಸಿ ಹತ್ಯೆ
ಬೆಂಗಳೂರು: ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಿಂದ ಯುವಕನೊಬ್ಬನನ್ನು ಮಹಿಳೆಯ ಸಂಬಂಧಿಕರು ಬೀದಿಯಲ್ಲೇ ಥಳಿಸಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಘಟನೆಯ ನಂತರ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಮೃತ ನರಸಿಂಹರಾಜು (32) ಶನಿವಾರ ಸಂಜೆ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ವಿವಾಹಿತೆಯೊಬ್ಬಳು ಭೇಟಿ ನೀಡಿದ್ದಳು. ಈ ಮಾಹಿತಿ ಮಹಿಳೆಯ ಸಂಬಂಧಿಕರಿಗೆ ತಿಳಿದ ತಕ್ಷಣ, ಐವರು ಯುವಕನ ಮನೆಗೆ ದಾಳಿ ನಡೆಸಿ ಆತನನ್ನು ಬಲವಂತವಾಗಿ ಹೊರ ಕರೆದು ರಸ್ತೆಮಧ್ಯೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ನಡೆದಿರುವುದಾಗಿ ಕುಟುಂಬದವರು ದೂರಿದ್ದಾರೆ.
ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ನರಸಿಂಹರಾಜುವನ್ನು ತಕ್ಷಣವೇ ಕೆ.ಸಿ. ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.