ಪಯ್ಯವೂರು ಶಿವ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೊಡಗಿನವರ ಊಟ್ ಉತ್ಸವಕ್ಕೆ ನಾಡಿನ ಅಕ್ಕಿ ಅಳೆಯುವ ಶಾಸ್ತ್ರ

ಪಯ್ಯವೂರು ಶಿವ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೊಡಗಿನವರ ಊಟ್ ಉತ್ಸವಕ್ಕೆ ನಾಡಿನ ಅಕ್ಕಿ ಅಳೆಯುವ ಶಾಸ್ತ್ರ

ವಿರಾಜಪೇಟೆ: ಕೇರಳ-ಕರ್ನಾಟಕ ಗಡಿಯ ಸಮೀಪವಿರುವ ಕಣ್ಣೂರು ಜಿಲ್ಲೆಯ ಪಯ್ಯವೂರು ಶಿವ ದೇವಾಲಯದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದು ಶುಕ್ರವಾರ ಬೆಳಿಗ್ಗೆ ಕೊಡಗಿನವರ ಊಟ್ ಉತ್ಸವದ 8 ಊಟ್ ಹಬ್ಬಕ್ಕೆ ಅಕ್ಕಿ ಅಳೆಯುವ ಶಾಸ್ತ್ರದ ಮೂಲಕ ಚಾಲನೆ ನೀಡಲಾಯಿತು.

 ಹಬ್ಬದ ಪ್ರಮುಖ ಭಾಗವಾದ ಕೊಡಗಿನ ಕಡಿಯತ್ತ್‍ನಾಡಿನ ಚೆಯ್ಯಂಡಾಣೆಯ ಮುಂಡ್ಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಗಳ ತಕ್ಕ ಮುಖ್ಯಸ್ಥರ ಹಾಗೂ ನಾಡಿನ ಪ್ರಮುಖ ಕುಟುಂಬಗಳ ಸದಸ್ಯರು ಕೊಡವರು ಪಯ್ಯವೂರ್ ಶಿವನಿಗೆ ಅರ್ಪಿಸಲು ಎತ್ತುಗಳ ಬೆನ್ನಿನ ಮೇಲೆ ಅಕ್ಕಿಯನ್ನು ದೇವಸ್ಥಾನಕ್ಕೆ ಸಾಗಿಸಿದ್ದು ದೇವಸ್ಥಾನದಲ್ಲಿ ಅದನ್ನು ಅಳೆಯುವ ಶಾಸ್ತ್ರ ಮಾಡುವ ಮೂಲಕ ನೈವೇದ್ಯಕ್ಕೆ ಹಾಗೂ ಊಟು ಕಜ್ಜಾ ಕ್ಕೆ ಅರ್ಪಿಸಲಾಯಿತು.

 ಇಲ್ಲಿ ಕೊಡಗಿನವರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದ್ದು, ಕೊಡಗಿನಿಂಧ ಕಾಡುದಾರಿಯಲ್ಲಿ ಎತ್ತುಗಳ ಮೂಲಕ ಅಕ್ಕಿ ಸಾಗಿಸುವು ಎತ್ತ್ ಪೋರಾಟ್‍ನಲ್ಲಿ ತೆರಳಿದವರನ್ನು ದೇವಾಲಯ ಸಮಿತಿ ಹಾಗೂ ಕೋಮರತಚ್ಚನ್ ಅವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಇಂದು 21 ರಂದು 9 ಊಟ್ ಹಾಗೂ 22 ರಂದು 10 ಊಟ್ ಹಬ್ಬ ನಡೆಯಲಿದ್ದು 24 ರಂದು ದೇವರ ಆರಾಟ್ ಉತ್ಸವ ನಡೆಯಲಿದೆ.

 ವಿಶೇಷವಾಗಿ 22ರವರೆಗೆ ಕೊಡಗಿನವರ ಹಬ್ಬ ನಡೆಯಲಿದೆ. ಬಳಿಕ ಅಗ್ನಿಕುಂಡಕ್ಕೆ ಅಗ್ನಿ ಇಡುವುದರೊಂದಿಗೆ ಕೊಡಗಿನ ಹಬ್ಬಕ್ಕೆ ಚಾಲನೆ ನೀಡಲಾಯಿತು. ದೇವಾಲಯದಲ್ಲಿ ಕೊಡಗಿನವರಿಗೆ ವಿಶೇಷ ಪ್ರಾದಾನ್ಯತೆ ನೀಡಲಾಗುತ್ತಿದ್ದು ಕೊಡಗಿನ ಸಾಂಪ್ರಾದಾಯಿಕ ನೃತ್ಯ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.

ಸಂಜೆ ದೇವರ ನೃತ್ಯಬಲಿ ಪ್ರದರ್ಶನ, ವಿವಿಧ ಪೂಜೆಗಳು ನೈವೇದ್ಯ ಸಮರ್ಪಣೆ ನಡೆಯಿತು. ಈ ಸಂದರ್ಭ ಮುಂಡ್ಯೋಳಂಡ ಬೊವ್ವೇರಿಯಂಡ ಕುಟುಂಬದ ತಕ್ಕ ಮುಖ್ಯಸ್ಥರು, ಕಡಿಯತ್ ನಾಡಿನ ಪ್ರಮುಖ ಕುಟುಂಬದವರು, ದೇವಾಲಯ ಸಮಿತಿಯವರು, ಆಡಳಿತ ಮಂಡಳಿ ಪ್ರಮುಖರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.