ನಗರ ಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯ: ರಾಜೇಶ್ ಯಲ್ಲಪ್ಪ ಆರೋಪ
ಮಡಿಕೇರಿ: ನಗರ ಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯ ವಾಗಿದ್ದು ಮಡಿಕೇರಿ ನಗರದ ಇತಿಹಾಸದಲ್ಲಿ ಇಂತಹ ಅವ್ಯವಸ್ಥೆ ಹಿಂದೆಂದೂ ಕಾಣಲಿಲ್ಲ ಎಂದು ಮಡಿಕೇರಿ ನಗರ ಸಭೆಯ ಕಾಂಗ್ರೆಸ್ ಸದಸ್ಯ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ತಮ್ಮ ವಿಶೇಷ ಅನುದಾನದಡಿ ಮೂರು ಕೋಟಿ ರೂಗಳನ್ನು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದು ಅದರಿಂದ ಮಡಿಕೇರಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ನಗರ ಸಭೆಯಿಂದ ನಯಾಪೈಸೆಯ ಕಾಮಗಾರಿ ಆಗಿಲ್ಲ ಎಂದು ಟೀಕಿಸಿದರು. ಹದಿನಾರು ಜನ ಬಿಜೆಪಿ ಸದಸ್ಯರನ್ನು ಹೊಂದಿದ್ದು ಉತ್ತಮ ಆಡಳಿತ ನಡೆಸುವ ಬದಲಿಗೆ ಗುಂಪುಗಾರಿಕೆ,ಕಿತ್ತಾಟಗಳಲ್ಲಿ ಕಾಲ ಕಳೆಯುತ್ತಿದ್ದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಈ ಬಾರಿ ಪ್ರಾಕೃತಿಕ ವಿಕೋಪ ಪರಿಹಾರದ ಅನುದಾನದಲ್ಲಿ 38 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಾಗ ಕೆಲವು ಬಿಜೆಪಿ ಸದಸ್ಯರು ತಾವು ಅವಲಂಬಿತವಾಗಿರುವ ಗುತ್ತಿಗೆದಾರರಿಗೆ ಕೆಲಸ ಸಿಗಲಿಲ್ಲ ಎಂದು ಕೆಲಸಕ್ಕೆ ತಡೆ ಒಡ್ಡಿ ಆ ಕಾಮಗಾರಿ ಕೆ.ಆರ್,ಐ.ಡಿ.ಎಲ್ ಗೆ ವಹಿಸುವಂತೆ ಆಗಿ ವಿಳಂಬಕ್ಕೆ ಎಡೆ ಮಾಡಿದರು.
ರಾಜಾ ಸೀಟ್ ಪಾರ್ಕಿಂಗ್ ವಿಚಾರದಲ್ಲಿ ಟೆಂಡರ್ ಹಣ ಕಟ್ಟಿಸಿಕೊಳ್ಳದೆ ನಗರ ಸಭೆಗೆ ನಷ್ಟ ಮಾಡಿದರು.ಮೀನು ಮಾರಟ ಟೆಂಡರ್ ವಿಚಾರದಲ್ಲಿ ಮತ್ತೊಂದು ರೀತಿ ವ್ಯವಹರಿಸಿ ಇಬ್ಬಗೆಯ ನೀತಿ ಪ್ರದರ್ಶನ ಮಾಡಿದರು. ಮೈಸೂರು ರಸ್ತೆಯಲ್ಲಿ ಅಪಾಯಕಾರಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿ ಬಿಜೆಪಿ ಮುಖಂಡರು ಪಾಲುದಾರರಾಗಿರುವ ಕಾರಣ ನಗರ ಸಭೆಯ ಆಡಳಿತ ಮಂಡಳಿ ಅಕ್ರಮಕ್ಕೆ ಬಹಿರಂಗವಾಗಿ ಪ್ರೋತ್ಸಾಹ ನೀಡಿರುವುದು ಜಗಜ್ಜಾಹೀರ್ ಆಗಿದ್ದು ನಗರ ಸಭೆಯ ಕಾನೂನು ಸಲಹೆಗಾರರು ಅಧಿಕೃತವಾಗಿ ಕಟ್ಟಡ ತೆರವುಗೊಳಿಸಲು ಸೂಚಿಸಿದ್ದರೂ ಭಂಡತನದಿಂದ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಜೇಶ್ ಯಲ್ಲಪ್ಪ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ ಸ್ವತಃ ನಗರ ಸಭೆಯ ಕಮಿಷನರ್ ರವರೇ ಸಾಮಾನ್ಯ ಸಭೆಯಲ್ಲಿ ಮೈಸೂರು ರಸ್ತೆಯ ಅನಧಿಕೃತ ವ್ಯಾಪಾರ ಮಳಿಗೆ ನಿರ್ಮಾಣದಲ್ಲಿ 9 ಗುರುತರ ತಪ್ಪುಗಳು ಕಂಡು ಬಂದಿದೆ ಎಂದು ಉತ್ತರಿಸಿದರೂ ಸೂಕ್ತ ಜರುಗಿಸದೇ ಇರುವುದು ಅಚ್ಚರಿ ಮೂಡಿಸಿದೆ.ಅಲ್ಲದೆ ಯಾವುದೇ ವ್ಯಾಪಾರ ಪರವಾನಿಗೆ ಪಡೆದಿರುವುದಿಲ್ಲ ಎಂಬ ಲಿಖಿತ ಉತ್ತರ ನಗ ಸಭೆ ಸಹಿ ಮತ್ತು ಮೊಹರಿನಿಂದ ನೀಡಿದೆ.ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ದ ಕಾನೂನು ರೀತಿಯಲ್ಲಿ ಕ್ರಿಮಿನಲ್ ಮೊಕ್ಕದಮ್ಮೆ ಹೂಡಲು ಮೇಲಿನ ಪ್ರಾಧಿಕಾರದ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆ ರವರಿಗೆ ಕೋರಲಾವುದು ಎಂದು ತಿಳಿಸಿದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ದೂರುಸಲ್ಲಿಸಲಾಗುವುದು ಎಂದು ತಿಳಿಸಿದರು. ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ,ನಗರ ಸಭೆ ನಾಮನಿರ್ದೇಶನ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ,ಜಿ.ಸಿ.ಜಗದೀಶ್,ಯಾಕುಬ್,ಮುದ್ದುರಾಜ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
