ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಕಲೆ, ಭಾಷೆ ಬಗ್ಗೆ ಅರಿವು ಮೂಡಿಸಬೇಕು:ಎಂಎಲ್ಸಿ ಸುಜಾ ಕುಶಾಲಪ್ಪ
ವಿರಾಜಪೇಟೆ: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಹೇಳಿದರು.
ವಿರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ ಮಹಿಳಾ ಸಮಾಜ ಸಭಾಂಗಣದಲ್ಲಿ 70 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರ ನಡೆದ ರಾಜ್ಯೋತ್ಸವ ಆಚರಣೆ ಹಾಗೂ ವಿವಿಧ ತಾಲೂಕು ಮಟ್ಟದ ಸ್ವರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಅವರು,
ನಾವು ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು. ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ನಿಶ್ಚಯಿಸಬೇಕು ಎಂದರಲ್ಲದೆ ಗಡಿ ಭಾಗವಾದ ವಿರಾಜಪೇಟೆ ವ್ಯಾಪ್ತಿಯಲ್ಲಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಎಲ್ಲ ಅಂಗಡಿಗಳಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೋಪಯ್ಯ ಮಾತನಾಡಿ, ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಅಗತ್ಯ. ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ಕಲಿಯೋಣ, ವ್ಯವಹಾರಕ್ಕಾಗಿ ಬಳಸೋಣ. ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸಬೇಕು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ.
2008ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಕನ್ನಡ ನಮ್ಮೆಲ್ಲರ ಹೆಮ್ಮೆ. ಭಾಷೆ ನಿರಂತರವಾಗಿ ಬಳಕೆಯಲ್ಲಿದ್ದಾಗ ಮಾತ್ರ ಅದರ ಸೌಂದರ್ಯ ಮತ್ತು ಅಭಿಮಾನ ಜೀವಂತವಾಗಿರುತ್ತದೆ ಎಂದು ಅವರು ಹೇಳಿದರಲ್ಲದೆ ಕನ್ನಡವನ್ನು ಸಮೃದ್ಧಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮ ಭಾಷೆ, ನಮ್ಮ ಹೆಮ್ಮೆ ಅದನ್ನು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ಮನೆಯಲ್ಲಿ ಮಾತನಾಡುವ ಬಾಷೆ ಯಾವುದೇ ಆಗಿದ್ದರೂ ವ್ಯವಹಾರಿಕವಾಗಿ ಕನ್ನಡ ಬಳಸಬೇಕು. ಎಲ್ಲ ಕಡೆ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕುವಂತಾಗಬೇಕು ಎಂದರು.
ಇದೇ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಚೆಪ್ಪುಡಿರ ಎಸ್ ಪೂಣಚ್ಚ, ಸೇನಾ ಕ್ಷೇತ್ರದಲ್ಲಿ ಚೇಂದ್ರಿಮಾಡ ನಂಜಪ್ಪ, ಶಿಕ್ಷಣ ಕ್ಷೇತ್ರದಲ್ಲಿ ದೇವಣಗೇರಿ ಬಿ.ಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಡಿ ಲೋಕೇಶ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಈರಮಂಡ ಹರಿಣಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ನಿರ್ದೇಶಕರಾದ ಚಿಲ್ಲವಂಡ ಕಾವೇರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೂಕಚಂಡ ಡಿ ಕಾವೇರಮ್ಮ, ಚೇಂದ್ರಮಾಡ ಪವೀನ್ ನಾಚಪ್ಪ ಸ್ಫರ್ದೆಗಳ ತೀರ್ಪುಗಾರಿಕೆ ನೀಡಿದರು. ಕುಸುಮ ಸೋಮಣ್ಣ, ಬಲ್ಲಡಿಚಂಡ ವಿಜು, ತಾತಂಡ ಪ್ರಭಾ ನಾಣಯ್ಯ ಸಾಧಕರುಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ.ಈ.ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳಂಡ.ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ.ಯು.ಗಣೇಶ್ ತಮ್ಮಯ್ಯ, ನಿರ್ಧೇಶಕರಾದ ಸಿ.ಪಿ. ಕಾವೇರಪ್ಪ, ಚೇನಂಡ.ಎ.ಸುರೇಶ್ ನಾಣಯ್ಯ, ಪುಗ್ಗೇರ ನಂದ, ಮುಂಡಂಡ.ರಾಣು ಮಂದಣ್ಣ, ಬೊಳ್ಯಪಂಡ ಎಂ.ಸುರೇಶ್, ಬಾಚೀರ.ಗಣೇಶ್ ಬಿದ್ದಪ್ಪ, ಕಂಜಿತಂಡ ಎಂ.ಮೊಣ್ಣಪ್ಪ, ಮೂಕಚಂಡ.ಬಿ. ದೇವಯ್ಯ, ಚಾರಿಮಂಡ ಯು. ಶರಣು ನಂಜಪ್ಪ, ಬಲ್ಲಡಿಚಂಡ ಜಿ. ವಿಜು ಕುಶಾಲಪ್ಪ, ಪೋರೇರ ಎಂ. ಬಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸ್ಫರ್ಧಾ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿ ಪೂಜಾ ಪ್ರಾರ್ಥಿಸಿ, ತಾತಂಡ ಪ್ರಭಾ ನಾಣಯ್ಯ ನಿರೂಪಿಸಿ, ಕಂಜಿತಂಡ ಎಂ.ಮೊಣ್ಣಪ್ಪ ಸ್ವಾಗತಿಸಿದರೆ, ಬಾಚೀರ ಗಣೇಶ್ ಬಿದ್ದಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
