ವಾಸಸ್ಥಳ ಬದಲಾವಣೆ ಆದವರು ಎನ್ಯುಮರೇಶನ್ ಫಾರಂ ಪಡೆಯಬಹುದು:ಬಿ.ಎಲ್.ಒ ಗಳು ಪೂರ್ವಗ್ರಹ ಪೀಡಿತರಾಗಿ ಮತದಾರರ ಹಕ್ಕು ಕಸಿದರೆ ಕಾನೂನು ಕ್ರಮ,ತೆನ್ನಿರ ಮೈನಾ ಎಚ್ಚರಿಕೆ
ಮಡಿಕೇರಿ: ವಾಸಸ್ಥಳ ಬದಲಾವಣೆ ಆದವರು ಎನ್ಯುಮರೇಶನ್ ಫಾರಂ ಪಡೆದು ಭರ್ತಿ ಮಾಡಲು ಅವಕಾಶ ಇದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಎಸ್.ಐ.ಆರ್ ವಾರ್ ರೂಂ ಸಂಚಾಲಕ ತೆನ್ನಿರ ಮೈನಾ ರವರು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಯಲ್ಲಿ ವಿಳಾಸ ಬದಲಾದ ಮತದಾರರಿಗೆ ಬಿ.ಎಲ್.ಒ ಗಳು ಎನ್ಯುಮರೇಶನ್ ಫಾರಂ ನೀಡಲು ಕೆಲವು ಕಡೆ ನಿರಾಕರಣೆ ಮಾಡಿರುವುದು ಗಮನಕ್ಕೆ ಬಂದಿದ್ದು ಇದರ ಬಗ್ಗೆ ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
2025 ರ ಮತದಾರರ ಪಟ್ಟಿ ಆಧಾರದಲ್ಲಿ ಮುದ್ರಿತವಾಗಿರುವ ಎನ್ಯುಮರೇಶನ್ ಫಾರಂ ನ್ನು ಪಡೆದು ಭರ್ತಿಮಾಡಲು ಎಲ್ಲಾ ಮತದಾರರಿಗೆ ಅವಕಾಶವಿದೆ.ಮೃತ ಪಟ್ಟವರು ಹೊರತು ಪಡಿಸಿ ಪ್ರತಿಯೊಬ್ಬರು ಫಾರಂ ಭರ್ತಿಮಾಡಬೇಕು. ವಿಳಾಸ ಬದಲಾದವರು ತಾವು ಮೊದಲು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು, ಆ ಮತಗಟ್ಟೆಯ ಬಿ.ಎಲ್.ಒ ಬಳಿ ಹೋಗಿ ಎನ್ಯುಮರೇಶನ್ ಫಾರಂ ಪಡೆದು ಭರ್ತಿ ಮಾಡಬೇಕು. ಆ ಸ್ಥಳದಲ್ಲಿ ಪ್ರಸ್ತುತ ವಾಸವಾಗಿಲ್ಲ ಎಂದು ಬಿ.ಎಲ್.ಒ ಗಳು ಫಾರಂ ನೀಡಲು ನಿರಾಕರಣೆ ಮಾಡುವಂತಿಲ್ಲ. ಫಾರಂ ಭರ್ತಿಮಾಡಲು ಸ್ಥಳೀಯ ಬಿ.ಎಲ್.ಎ 2 ರವರ ನೆರವು ಪಡೆಯಬಹುದು ಎಂದು ತೆನ್ನಿರ ಮೈನಾ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಬಿ.ಎಲ್.ಒ ಗಳು ಪೂರ್ವಗ್ರಹ ಪೀಡಿತರಾಗಿ ಕೂಲಿ ಕಾರ್ಮಿಕರು,ಲೈನ್ ಮನೆಗಳಲ್ಲಿ ವಾಸಮಾಡುತ್ತಿದ್ದವರು,ಅಲೆಮಾರಿಗಳು, ಇಂತಹ ಮತದಾರರಿಗೆ ವಿಳಾಸ ಬದಲಾಗಿದೆ ಎಂದು ಎನ್ಯುಮರೇಶನ್ ಫಾರಂ ಹಂಚಿಕೆ ಮಾಡದೆ permanent Shifted ಎಂದು ದಾಖಲಿಸಿಕೊಂಡಿರುವ ಬಗ್ಗೆ ವಾರ್ ರೂಮ್ ಗೆ ಮಾಹಿತಿ ಲಭ್ಯವಾಗಿದ್ದು ಇದು ಕಾನೂನಿಗೆ ವಿರುದ್ದವಾಗಿದೆ. ಅಂತಹ ಬಿ.ಎಲ್.ಒ ಗಳ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಗುವುದು ಎಂದು ತೆನ್ನಿರ ಮೈನಾ ಎಚ್ಚರಿಕೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
