ನೆಲ್ಲಿಹುದಿಕೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಯುವಕರ ಬಂಧನ

ನೆಲ್ಲಿಹುದಿಕೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಯುವಕರ ಬಂಧನ

ಸಿದ್ದಾಪುರ: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ಹೊಳೆಯ ಹಳೆ ಸೇತುವೆಯಿಂದ ಕುಂಬಾರಗುಂಡಿಗೆ ತೆರಳುವ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

 ಬಂಧಿತರನ್ನು ಗೂಡುಗದ್ದೆ ಗ್ರಾಮದ ಧನುಷ್ (23), ಕರಡಿಗೋಡು ಗ್ರಾಮದ ಗೌತಮ್ (19) ಹಾಗೂ ನೆಲ್ಯಹುದಿಕೇರಿ ಗ್ರಾಮದ ಅನ್ಸಾದ್ (23) ಎಂದು ಗುರುತಿಸಲಾಗಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ ಸುಮಾರು 10.30 ಗಂಟೆಗೆ ಆರೋಪಿಗಳು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಸಿದ್ದಾಪುರ ಠಾಣೆಯ ಎಎಸ್‌ಐ ಮಂಜುನಾಥ್‌ ಎಚ್‌.ಕೆ. ನೇತೃತ್ವದ ತಂಡ ದಾಳಿ ನಡೆಸಿತು.

 ಈ ವೇಳೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಸುಮಾರು 612 ಗ್ರಾಂ ಗಾಂಜಾ, ₹300 ನಗದು, ಐಫೋನ್-14, ಐಫೋನ್-13, ಮೊಟೊರೊಲಾ ಆಂಡ್ರಾಯ್ಡ್ ಮೊಬೈಲ್ ಫೋನ್, ಮೂರು ಖಾಲಿ ಜಿಪ್-ಲಾಕ್ ಕವರ್‌ಗಳು ಹಾಗೂ ಕಪ್ಪು-ಕೆಂಪು ಬಣ್ಣದ ಬ್ಯಾಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.