ಕಿರುಗೂರಿನಲ್ಲಿ ಹುಲಿ ದಾಳಿ; ಕರು ಬಲಿ

ಕಿರುಗೂರಿನಲ್ಲಿ  ಹುಲಿ ದಾಳಿ; ಕರು ಬಲಿ

ಪೊನ್ನಂಪೇಟೆ. ಮಾ. 26: ಪೊನ್ನಂಪೇಟೆ ತಾಲೂಕಿನಲ್ಲಿ ಜಾನುವಾರುಗಳ ಮೇಲೆ ಮತ್ತೆ ಹುಲಿ ದಾಳಿ ಮುಂದುವರೆದಿದ್ದು, ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಣಿ ಎಂಬಲ್ಲಿ ವಿ. ಎಂ. ರವೀಂದ್ರ ಎಂಬವರ ಎರಡು ವರ್ಷ ಪ್ರಾಯದ ಕರು ಹುಲಿ ದಾಳಿಗೆ ಬಲಿಯಾಗಿದೆ.

 ತಾ. 25 ರಂದು ನಸುಕಿನ ವೇಳೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿ, ಸಮೀಪದ ಗದ್ದೆ ಕಡೆಗೆ ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊನ್ನಂಪೇಟೆ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ದಿವಾಕರ್, ಆರ್ ಆರ್ ಟಿ ಸಿಬ್ಬಂದಿ ಹಾಗೂ ಅರಣ್ಯ ಪಾಲಕರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಹುಲಿ ಹೆಜ್ಜೆ ಗುರುತು ಆದರಿಸಿ ಸುತ್ತಾ ಮುತ್ತ ಕೂಂಬಿಂಗ್ ಕಾರ್ಯಾಚರಣೆ ನಡೆಸಿ, ಹುಲಿ ಗುರುತು ಪತ್ತೆಗೆ ಕ್ಯಾಮರಗಳನ್ನು ಅಳವಡಿಸಿದ್ದಾರೆ.

 ಜಾನುವಾರು ಹಂತಕ ಹುಲಿಯನ್ನು ಸೆರೆ ಹಿಡಿದು ಆತಂಕ ನಿವಾರಿಸುವಂತೆ ಹಾಗೂ ಕರುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.