ವಿರಾಜಪೇಟೆ;ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ
ವಿರಾಜಪೇಟೆ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡ ಕೂಲಿ ಕಾರ್ಮಿಕ ಕುಟುಂಬಗಳ ಪಡಿತರ ಚೀಟಿಯನ್ನು ರದ್ದು ಮಾಡುತ್ತಿರುವುದರಿಂದ ಬಡ ಕುಟುಂಬಗಳಿಗೆ ಸರಕಾರದ ಪಡಿತರ ಸೌಲಭ್ಯಗಳು ದೊರಕುತ್ತಿಲ್ಲ. ಕೂಡಲೆ ಸರಕಾರ ಸ್ಪಂದಿಸಿ ಅರ್ಹ ಪಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ [ಮಾರ್ಕ್ಸ್ವಾದಿ] ನಗರ ಸಮಿತಿ ವತಿಯಿಂದ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ತಲುಪಿಸುವಂತೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಂದರ್ಭ ಸಿ.ಪಿ.ಐ.ಎಂ. ಪಕ್ಷದ ಜಿಲ್ಲಾ ಸಮಿತಿಯ ಎ.ಸಿ. ಸಾಬು ಅವರು ಮಾತನಾಡಿ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರ ಬಡ ಕೂಲಿ ಕಾರ್ಮಿಕರ ಪಡಿತರ ಸೌಲಭ್ಯವನ್ನು ರದ್ದು ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ೭,೭೬ ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರ ರಾಜ್ಯಕ್ಕೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈಗಾಗಲೇ ೩ ಲಕ್ಷದ ೬೫ ಸಾವಿರ ಪಡಿತರ ಚೀಟಿ ರದ್ದು ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ೪ ಸಾವಿರದ ೫ ನೂರಕ್ಕೂ ಹೆಚ್ಚು ಕಾರ್ಡ್ಗಳು ರದ್ದು ಮಾಡಲಾಗಿದ್ದು, ಸರಕಾರದ ಬಿಪಿಎಲ್ ಪಡಿತರ ಚೀಟಿ ಪಡೆಯಲು ಕುಟುಂಬದ ವಾರ್ಷಿಕ ಆದಾಯ ೧ ಲಕ್ಷದ ೨೦ ಸಾವಿರ ನಿಗದಿ ಮಾಡಲಾಗಿದೆ. ಅದರಿಂದ ರದ್ದು ಮಾಡಿರುವ ಪಡಿತರ ಚೀಟಿಯನ್ನು ಕೂಡಲೇ ವಿತರಿಸಬೇಕು ಇಲ್ಲವಾದಲ್ಲಿ ಕಾರ್ಮಿಕ ಸಂಘಟನೆಗಳಿಂದ ಹೆಚ್ಚಿನ ರೀತಿಯ ಹೋರಾಟದ ಅನಿವಾರ್ಯವಿದೆ ಎಂದು ಸಾಬು ಎಚ್ಚರಿಸಿದರು.
ಸಿ.ಪಿ.ಐ ಮುಖಂಡ ವಕೀಲ ಕೆ.ವಿ. ಸುನೀಲ್ ಅವರು ಮಾತನಾಡಿ ಸರಕಾರ ಪಡಿತರ ಚೀಟಿ ರದ್ದು ಮಾಡಿರುವ ನೀತಿಯನ್ನು ನಾವು ವಿರೋದಿಸುತ್ತೇವೆ. ರಾಜ್ಯದಲ್ಲಿ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯ ಮೂಲಕ ಮತ್ತಷ್ಟು ಅಗತ್ಯ ವಸ್ತುಗಳನ್ನು ವಿತರಿಸುವಂತಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಎಂ ಪಕ್ಷದ ನಗರ ಸಮಿತಿಯ ಕೆ.ಎಸ್. ರಮೇಶ್ ಶಾಜಿ, ಪದ್ಮಿನಿ ಶ್ರಿಧರ್, ದಲಿತ ಸಮಿತಿಯ ಸತೀಶ್ ಕುಮಾರ್ ಪ್ರತಿಭಟನೆ ಸಂದರ್ಭ ಮಾತನಾಡಿದರು. ಮನವಿ ಸ್ವಿಕರಿಸಿದ ತಹಶೀಲ್ದಾರ್ ಪ್ರವಿಣ್ ಕುಮರ್ ಮಾತನಾಡಿ ಪಡಿತರ ಚೀಟಿಯನ್ನು ರದ್ದು ಮಾಡಲು ಕರಣ ಏನೆಂಬುದು ತಿಳಿದು ಬಂದಿಲ್ಲ. ಯಾರ ಪಡಿತರ ಚೀಟಿ ರದ್ದು ಮಾಡಲಾಗಿದೆ ಎಂಬುದನ್ನು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದ ಅವರು ಕಾರ್ಡ್ ಬಗ್ಗೆ ಕಂಪ್ಯೂಟರ್ನಲ್ಲಿ ನೋಡಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪ್ರತಿಭಟನಾಕಾರರಿಗೆ ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐ ಎಂ ಪಕ್ಷದ ಎ. ಹಮೀದ್, ಕೆ.ಎಸ್. ರತೀಶ್, ಹರಿದಾಸ್, ಖಾಸಿಂ, ಬಾಪುಟ್ಟಿ, ಡಿವೈ ಎಫ್ಐ ಎ.ಹೆಚ್. ಸಾಧೀಕ್, ದಲಿತ ಸಮಿತಿಯ ಕುಮಾರ, ಮಹಿಳಾ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.