ನೆಲ್ಲಿಹುದಿಕೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾಗಾರ
ಸಿದ್ದಾಪುರ, ಜೂ. 22: ನೆಲ್ಯಾಹುದಿಕೇರಿ ಜುಮ್ಮಾ ಮಸೀದಿ ನೇತೃತ್ವದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಈ ಸಂದರ್ಭದಲ್ಲಿ ಮತದಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ವಕೀಲ ತಾಹಿರ್ ಹುಸೇನ್ ಅವರು SIR ಎಂದರೇನು ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದರು. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.
ಚುನಾವಣಾ ಆಯೋಗವು ಸಿದ್ಧಪಡಿಸಿರುವ 2 ಸೆಟ್ ಅರ್ಜಿ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ನೀಡಲಿದ್ದಾರೆ. 2002ರ ಮತದಾರ ಪಟ್ಟಿ ಆಧಾರದ ಮೇಲೆ ಅರ್ಜಿ ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಅಂಟಿಸಿ ಒಂದು ಅರ್ಜಿಯನ್ನು BLOಗೆ ಸಲ್ಲಿಸಬೇಕು.
ಇನ್ನೊಂದು ಅರ್ಜಿಯನ್ನು ಅಧಿಕಾರಿಯ ಸಹಿಯೊಂದಿಗೆ ಮತದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು. ಆಯೋಗವೇ ಸಿದ್ಧಪಡಿಸಿದ ಅರ್ಜಿ ಒಂದೇ ಸಿಗುವುದರಿಂದ, ಮೊದಲು ಜೆರಾಕ್ಸ್ ತೆಗೆದು ಡ್ರಾಫ್ಟ್ ಮಾಡಿ, ಯಾವುದೇ ತಪ್ಪುಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ಅಸಲಿ ಅರ್ಜಿ ಭರ್ತಿ ಮಾಡುವಂತೆ ಸಲಹೆ ನೀಡಿದರು.

