ನೀವೇ MLC ಎಂಬುದಕ್ಕೆ ಏನು ಗ್ಯಾರಂಟಿ?’ ಬಿಜೆಪಿ ವಿಧಾನಪರಿಷತ್ ಸದಸ್ಯರ ಕಾರು ತಡೆದ ಟೋಲ್ ಸಿಬ್ಬಂದಿ

ನೀವೇ MLC ಎಂಬುದಕ್ಕೆ ಏನು ಗ್ಯಾರಂಟಿ?’  ಬಿಜೆಪಿ ವಿಧಾನಪರಿಷತ್ ಸದಸ್ಯರ ಕಾರು ತಡೆದ ಟೋಲ್ ಸಿಬ್ಬಂದಿ

ವಿಜಯಪುರ, ಡಿ.21: ‘ನೀವೇ ಎಂಎಲ್‌ಸಿ ಎನ್ನುವುದಕ್ಕೆ ಏನು ಗ್ಯಾರಂಟಿ?’ ಎಂದು ಪ್ರಶ್ನಿಸಿ, ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರ ಕಾರನ್ನು ಟೋಲ್ ಸಿಬ್ಬಂದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದ ಘಟನೆ ವಿಜಯಪುರ ಹೊರವಲಯದ ಟೋಲ್ ಪ್ಲಾಝಾದಲ್ಲಿ ಭಾನುವಾರ ನಡೆದಿದೆ.

ಸೋಮವಾರ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕೇಶವ ಪ್ರಸಾದ್ ಅವರು ವಿಜಯಪುರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟೋಲ್ ಪ್ಲಾಝಾದಲ್ಲಿ ಕಾರನ್ನು ನಿಲ್ಲಿಸಿದ ಸಿಬ್ಬಂದಿ, MLC ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಪುರಾವೆ ಕೇಳಿ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಈ ವೇಳೆ ಕಾರು ಚಾಲಕ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ, ಸಿಬ್ಬಂದಿಯೊಬ್ಬರು ಮೊಬೈಲ್‌ನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಕೇಶವ ಪ್ರಸಾದ್ ಅವರು ತಕ್ಷಣವೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಕೂಡಲೇ ವಿಜಯಪುರ ಗ್ರಾಮೀಣ ಠಾಣೆಯ ಸಿಪಿಐ ಹಾಗೂ ಡಿವೈಎಸ್‌ಪಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಟೋಲ್ ಸಿಬ್ಬಂದಿ ಕೇಶವ ಪ್ರಸಾದ್ ಅವರ ಕಾರನ್ನು ಬಿಟ್ಟರು ಎಂದು ತಿಳಿದು ಬಂದಿದೆ.