ಮನುಷ್ಯನ ಅಂತಕರಣ ಭಾಷೆಯ ಒಳ ಮಿಡಿತಗಳು ತಿಳಿದಾಗ ವಿರಳವಾದ ಮತ್ತು ಸರಳವಾದ ಕಾವ್ಯ ಸೃಷ್ಟಿಯಾಗುವುದು; ಜಗದೀಶ್ ಜೋಡುಬಿಟಿ ಅಭಿಪ್ರಾಯ

ಮನುಷ್ಯನ ಅಂತಕರಣ ಭಾಷೆಯ ಒಳ ಮಿಡಿತಗಳು ತಿಳಿದಾಗ ವಿರಳವಾದ ಮತ್ತು ಸರಳವಾದ ಕಾವ್ಯ ಸೃಷ್ಟಿಯಾಗುವುದು;  ಜಗದೀಶ್ ಜೋಡುಬಿಟಿ ಅಭಿಪ್ರಾಯ

ಗೋಣಿಕೊಪ್ಪ: ಮನುಷ್ಯನ ಅಂತಕರಣ ಭಾಷೆಯ ಒಳ ಮಿಡಿತಗಳು ತಿಳಿದಾಗ ವಿರಳವಾದ ಮತ್ತು ಸರಳವಾದ ಕಾವ್ಯ ಸೃಷ್ಟಿಯಾಗುವುದು ಎಂದು ಕವಿ ಮತ್ತು ಪತ್ರಕರ್ತ ಜಗದೀಶ್ ಜೋಡುಬಿಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ನಡೆದ ಜಿಲ್ಲಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಕವಿಗೋಷ್ಠಿ ಅಧ್ಯಕ್ಷತೆಯಲ್ಲಿ ಮಾತನಾಡಿದರು.

 ಆಧುನಿಕ ಭಾವನೆಗಳನ್ನು ಪೂರಣಗಳ ಅನುಭವದಲ್ಲಿ ಕರಗಿಸಿ ಅಭಿವ್ಯಕ್ತಿ ಪಡಿಸಿಕೊಂಡಾಗ ಸ್ಥಿರವಾದ ನೆಲೆಯಲ್ಲಿ ಕಾವ್ಯ ನಿಲ್ಲುತ್ತದೆ. ಕ್ಷಿತಿಜದದಾಚೆಗೂ ಒಂದು ಕಣ್ಣೋಟ ನೆಟ್ಟಾಗ ಕವಿತೆಗಳು ಪ್ರಬುದ್ಧತೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾವ್ಯ ಕಟ್ಟುವುದು ಒಂದು ಕಸುಬುಗಾರಿಕೆ. ಬಿಡಿಯಾದ ಮಲ್ಲಿಗೆಯ ಮೊಗ್ಗನು ಮಾಲೆಯಾಗಿಸುವ ಕುಸುರಿ. ಪದಗಳು ಎದೆಯೊಳಗಿನ ಲಾಲಿತ್ಯದ ಗಿಲಿಕಿಯಾಗಬೇಕು. ಕವಿತೆ ಕಟ್ಟುವುದು ಧ್ಯಾನಸ್ಥ ಸ್ಥಿತಿಯ ಅವಲಂಬನೆ. ಆಧ್ಯಾತ್ಮದ ತಪಸ್ಸು, ಮತ್ತು ಹೊನಪು ಎಂದರು. ಕವಿತೆಯನ್ನು ಕಟ್ಟುವುದಲ್ಲ ಅದನು ಕೆತ್ತಬೇಕು. ಹಾಗೇ ಮಾಡಿದಾಗ ಕವಿತೆಗೆ ಒಂದು ಶಿಲೆಯ ಸೌಂದರ್ಯ ಸಿಗಬಲ್ಲದು. ಇಂತಹ ಕವಿತೆಗಳು ಸೃಷ್ಟಿಯಾದಾಗ ಜನರೆಡೆಯ ದಿಗಂತಗಳಲ್ಲಿ ಕಾವ್ಯ ವಿಸ್ತಾರಗೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದರು.

ಕವಿಗೋಷ್ಠಿ ಉದ್ಘಾಟಿಸಿ ಕವಯತ್ರಿ ಕೆ.ಜಿ. ರಮ್ಯ ಮಾತನಾಡಿ, ಕವಿತೆ ಅಂತರಂಗದ ಅನುಭವಗಳ ಶ್ರಾವಿಕ ಅಭಿವ್ಯಕ್ತಿ. ಕವಿತೆ ನಿರಂತರ ಹರಿವು ಅದನ್ನು ಪದಗಳಿಂದ ಕಟ್ಟಿಹಾಕಲು ಸಾಧ್ಯವಿಲ್ಲ. ಸಾಹಿತ್ಯದಲ್ಲಿ ಕಾವ್ಯ ಪ್ರಕಾರ ಸರಳ ಎನಿಸಿದರೂ ಅಪಾರ ಸಮಯವನ್ನು ಮತ್ತು ಅಂತರ್ ಶಕ್ತಿಯನ್ನು ಕವಿತೆ ಪಡೆದುಕೊಳ್ಳುತ್ತದೆ. ಶಬ್ದಗಳ ಚೌಕಟ್ಟಿಗೆ ನಿರ್ಬಂಧಿಸಿ ಕವಿತೆ ಬರೆದಾಗ ನಮ್ಮೊಳಗಿನ ಕವಿ ನಿರ್ಜೀವಿ ಆಗುತ್ತಾನೆ. ಕವಿತೆ ನಮ್ಮೊಳಗೆ ನಮ್ಮನ್ನು ಬೇರೆಯವರೊಳಗೆ ನಮ್ಮನ್ನು ಕಂಡುಕೊಳ್ಳಲು ಇರುವ ಸಾಧನ. ನಮ್ಮ ಚಿತ್ತಾ ಹುತ್ತಗಟ್ಟಬೇಕು. ಧ್ಯಾನಸ್ಥ ಸ್ಥಿತಿಗೆ ಕುಂಡೊಯ್ಯಬೇಕು. ಕವಿತೆ ವಸ್ತು ಪ್ರಕಾರದಲ್ಲಿ ಕಾಡಬೇಕು. ಇಂತಹ ಕವಿತೆಗಳನ್ನ ಬರೆಯುವುದು ಉತ್ತಮ ಎಂದರು.

ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜತೆಗೆ ಭಾಷೆಯನ್ನು, ನಿಯಮಗಳನ್ನು ಮೀರಿ ಕವಿತೆಗಳನ್ನು ಹೊಸ ಹೊಸ ಪ್ರಯೋಗಳೊಂದಿಗೆ ಹೊಸಯುವ ವಿಚಾರದ ಕಡೆ ಯುವ ಸಮುದಾಯ ಮನ ಹಾಯಿಸಬೇಕು ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ದತ್ತಿನಿಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವನ್ನು ಪರಿಷತ್ ಮುಂದುವರಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಡೆ ಸಾಹಿತ್ಯದ ಒಲವನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.

ಅವುಗಳಲ್ಲಿ ಉತ್ತಮ ನಾಲ್ಕು ಪ್ರಬಂಧಗಳನ್ನು ಆಯ್ಕೆ ಮಾಡಿ ವಿಜೇತರನಾಗಿ ಮಾಡಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿಯನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಪ್ರೆರಣದಾಯಕ ಆಸಕ್ತಿಯನ್ನು ಮೂಡಿಸಲಾಗುತ್ತಿದೆ ಎಂದರು. ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿಪಿ ರಮೇಶ್ ಮಾತನಾಡಿ, ಸಾಹಿತ್ಯ ಪ್ರಕಾರಗಳನ್ನು ಹೆಚ್ಚು ತಿಳಿದುಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

ದತ್ತಿ ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ ಮಾತನಾಡಿ, ಮಕ್ಕಳು ಸಾಮಾಜಿಕ ಮೌಲ್ಯಗಳ ಬಗ್ಗೆ ಹೆಚ್ಚು ಆಸಕ್ತರಾಗಿ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಸಮಾಜದ ಪ್ರಾಮುಖ್ಯತೆಯಾಗಿ ಕಾಣಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿರ್ಮಲ ಮಾತನಾಡಿ, ಕಲಿಕೆ ಎಂಬುವುದು ಪ್ರತಿಯೊಬ್ಬ ವ್ಯಕ್ತಿಯ ನಿರಂತರವಾದ ಸಾಧನೆಯಾಗಿದೆ. ವಿಷಯ ವಸ್ತುಗಳನ್ನ ಹಂತಹಂತವಾಗಿ ಕಲಿಯುವ ಮೂಲಕ ವಿದ್ಯಾರ್ಥಿಗಳು ಪ್ರೌಢತೆಯನ್ನ ಗಳಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವಿತ ವಾಚನ ಮಾಡಿದರು. ಪ್ರಬಂಧ ಸ್ಪರ್ಧೆ ವಿಜೇತರುಗಳಾದ ಮನ ಕೆ.ಆರ್, ಫಹಿನಾ ಟಿ.ಎ, ಅನುಷಾ ಪಿ,ಅರ್ , ಪ್ರೇಕ್ಷ ಜಿ.ಎಂ ಪ್ರೋತ್ಸಾಹಕರ ಬಹುಮಾನ ಪಡೆದುಕೊಂಡರು. ಕ.ಸಾ.ಪ ಜಿಲ್ಲಾ ಸಂಘಟಾತ್ಮಕ ಕಾರ್ಯದರ್ಶಿ ವಾಸುರೈ, ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್, ಕಾಲೇಜಿನ ಉಪನ್ಯಾಸಕರು, ಅಭಿವೃದ್ದಿ ಸಮಿತಿ ಸದಸ್ಯೆ ಪ್ರೇಮ ಇದ್ದರು.