ಕಾರಿನಲ್ಲಿ ಮಹಿಳೆಯ ಮೃತದೇಹ ಸಾಗಾಟ ಪ್ರಕರಣ: ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ!
ಮಡಿಕೇರಿ: ಮೈಸೂರಿನಲ್ಲಿ ನೆಲೆಸಿದ್ದ ಹರಿಯಾಣ ರಾಜ್ಯದ ನಾನಕಿದೇವಿ ಎಂಬ ಮಹಿಳೆಯ ಮೃತದೇಹವನ್ನು ತಾ.14ರಂದು ಮೈಸೂರಿನಿಂದ ಕೊಡಗಿಗೆ ಮೂವರು ಸಾಗಿಸುವಾಗ ಮಾಲ್ವಾರೆ ಗ್ರಾಮದ ಲಿಂಗಪುರ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿ, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಮೃತದೇಹಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ಮೃತ ಮಹಿಳೆಯ ದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಮಹಿಳೆಯು ತಾನು ನೆಲೆಸಿದ್ದ ಮೈಸೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿರುವುದಾಗಿ ತಿಳಿದುಬಂದಿದ್ದು, ಮೃತಪಟ್ಟ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿ ಮೃತ ದೇಹವನ್ನು ಹರಿಯಾಣದಿಂದ ಕೊಡಗು ಜಿಲ್ಲೆಗೆ ಆಗಮಿಸಿದ್ದ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ನ.18ರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿಗಳು ಮಡಿಕೇರಿಗೆ ತೆರಳಿದ್ದು, ಇವರುಗಳೆ ಸಮ್ಮುಖದಲ್ಲಿಯೇ ಮಡಿಕೇರಿಯ ಜಿಲ್ಲಾ ಆಸತ್ರೆಯಲ್ಲಿ ನಾನಕಿ ದೇವಿಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.