ಗೋಣಿಕೊಪ್ಪ ಕೆವಿಕೆ ಕೇಂದ್ರದಲ್ಲಿ ರೈತರು ಮತ್ತು ಬೆಳೆಗಾರರಿಗೆ ಮಣ್ಣಿನ ಪೋಷಕಾಂಶದ ಬಗ್ಗೆ ಕಾರ್ಯಗಾರ
ಗೋಣಿಕೊಪ್ಪ : ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಆಧಾರಿತ ಪೋಷಕಾಂಶ ಕುರಿತು ಕಾಫಿ ಬೆಳೆಗಾರರಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಭಾಗವಹಿಸಿದ 62 ಕಾಫಿ ಬೆಳೆಗಾರರಿಗೆ ಮತ್ತು ರೈತರಿಗೆ ವೈಜ್ಞಾನಿಕ ಆಧಾರಿತ ರಸಗೊಬ್ಬರ ಬಳಕೆಯ ಮಹತ್ವವನ್ನು, ಮಣ್ಣಿನ ಆರೋಗ್ಯ ಸುಧಾರಣೆ, ಸಸ್ಯಗಳ ರೋಗನಿರೋಧಕ ಶಕ್ತಿ ಹೆಚ್ಚಳ, ಉತ್ಪಾದಕತೆ ವೃದ್ಧಿ ಹಾಗೂ ಆಮದು ಅವಲಂಬನೆ ಕಡಿತ ಸಾಧ್ಯವಾಗುವುದನ್ನು ತಜ್ಞರು ವಿವರಣೆ ನೀಡಿದರು.
ವಿಶೇಷವಾಗಿ ಜೈವಿಕ ಗೊಬ್ಬರಗಳ ಬಳಕೆ ಮತ್ತು ವರ್ಮಿಕಂಪೋಸ್ಟ್, ಜೀವಾಮೃತ, ಪಂಚಗವ್ಯ, ನೀಂ ಕೇಕ್, ಹೊಂಗೆ ಕೇಕ್, ಟ್ರೈಕೋಡರ್ಮಾ ಇವುಗಳನ್ನು ಬಳಸಿ ಮಣ್ಣಿನ ಆರ್ಗಾನಿಕ್ ಕಾರ್ಬನ್, ಜೀವ ವೈವಿಧ್ಯತೆಯನ್ನು ಹೆಚ್ಚಿಸಬಹುದು ಎಂದು ತಿಳಿಸಲಾಯಿತು.
ಸೂಕ್ಷ್ಮ ಪೋಷಕಾಂಶಗಳ ಮಹತ್ವವನ್ನು ವಿವರಿಸಿ, “ಹಿಡನ್ ಹಂಗರ್” ಸಮಸ್ಯೆಯನ್ನು ತಪ್ಪಿಸಲು ಮತ್ತು ಸಮತೋಲನ ಪೋಷಣೆಯನ್ನು ಒದಗಿಸಲು ಮಾಹಿತಿ ನೀಡಲಾಯಿತು.
ಪೊನ್ನಂಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೊರೈರಾಜ್, ಕೊಡಗು ಕೃಷಿ ಇನ್ಪುಟ್ ಡೀಲರ್ಸ್ ಸಂಘದ ಅಧ್ಯಕ್ಷ ನಂದಕುಮಾರ್, ಸೇರಿದಂತೆ ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಇದ್ದರು.