ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಜೇನುನೊಣ ದಿನಾಚರಣೆ

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ  ವಿಶ್ವ ಜೇನುನೊಣ ದಿನಾಚರಣೆ

ಗೋಣಿಕೊಪ್ಪ : ಸ್ಥಳೀಯ ಜೇನು ಉತ್ಪನ್ನಗಳ ಗುಣಮಟ್ಟ ಗುರುತಿಸುವಿಕೆ, ಮೌಲ್ಯವರ್ಧನೆ ಹಾಗೂ ಬ್ರಾಂಡಿಂಗ್ ಮೂಲಕ ಜೇನು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಬಹುದಾಗಿದೆ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ. ಬಿ. ಪಾಟೀಲ್ ತಿಳಿಸಿದರು.

ಮಡಿಕೇರಿ ವಿಸ್ತರಣಾ ಶಿಕ್ಷಣ ,ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಮಂಡ್ಯ ಕೃಷಿ ವಿಶ್ವವಿದ್ಯಾಲಯ ,ರೇನ್ ಫಾರೆಸ್ಟ್ ಅಲೈನ್ಸ್ ಮತ್ತು ಭೈಫ್ ಸಬಲ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜೇನುನೊಣ ದಿನಾಚರಣೆಯಲ್ಲಿ ಜೇನುತುಂಬಿದ ಎರಿಯನ್ನು ಕತ್ತರಿಸಿ ಕಾರ್ಯಕ್ರಮಕೆ ಚಾಲನೆ ನೀಡಿ ವಿಚಾರ ಮಂಡಿಸಿದರು.

ಸ್ಥಳೀಯ ಜೇನು ಜಾತಿಗಳ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಬ್ರಾಂಡಿಂಗ್, ಗುಣಮಟ್ಟದ ಪ್ರಮಾಣೀಕರಣ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಅಗತ್ಯವಾಗಿದ್ದು, ತೋಟಗಾರಿಕೆ ಇಲಾಖೆಯ ವತಿಯಿಂದ ಜೇನು ಉತ್ಪಾದಕರ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಅಗತ್ಯವಿದೆ ಎಂದರು.

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಬಸವರಾಜು ಮಾತನಾಡಿ, ಜೇನುಗಳ ಪಾತ್ರವು ಜೇನುತುಪ್ಪ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಅವು ಕೃಷಿ ಉತ್ಪಾದನೆ ಮತ್ತು ಆಹಾರ ಸರಪಳಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ.

ಜೇನುಗಳು ಪರಾಗಸ್ಪರ್ಶ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚುವುದರ ಜೊತೆಗೆ ಜೈವ ವೈವಿಧ್ಯತೆಯ ಸಂರಕ್ಷಣೆಯಲ್ಲಿಯೂ ನೆರವಾಗುತ್ತವೆ. ಜೇನುಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು,ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜೇನು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಭೈಪ್ ಕೊಡಗು ಡಿಸ್ಟಿಕ್ ಇನ್ ಚಾರ್ಜ್ ಗಂಗಾ ಅಂಕದ್ ಮಾತನಾಡಿ , ಕೊಡಗು ಜಿಲ್ಲೆಯಲ್ಲಿ ರೈತರು , ಬುಡಕಟ್ಟು ಸಮುದಾಯದವರಲ್ಲಿ ಜೇನು ಕೃಷಿಯ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ ಎಂದರು.ರೇನ್ ಫಾರೆಸ್ಟ್ ಅಲೈನ್ಸ್ ಸಹಯೋಗದಲ್ಲಿ ಒಂಬತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಕ್ಲಸ್ಟರ್ ಯೋಜನೆ ಜಾರಿಗೊಂಡಿದ್ದು, ಸುಂಟಿಕೊಪ್ಪ ಮತ್ತು ತಿತಿಮತಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದರ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ. ಎಂ.ದೇವಗಿರಿ ಮಾತನಾಡಿದರು.

ಮಡಿಕೇರಿ ಶಿಕ್ಷಣ ಘಟಕಡ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಜೇನು ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವ, ಕೊಡಗಿನ ಪ್ರಗತಿಪರ ಜೇನು ಕೃಷಿಕರ ಮಾಯಮುಡಿ ಗ್ರಾಮದ ಮನೋಜ್ ಕುಮಾರ್, ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ಶೈಲಜ್ ಕುಮಾರ್, ಶ್ರೀಮಂಗಲ ಹೋಬಳಿಯ ಕುಮಟೂರು ಗ್ರಾಮದ ಸೂರಜ್. ಪಿ. ಎಸ್ ಅವರನ್ನು ಸನ್ಮಾನಿಸಲಾಯಿತು.

ಜೇನಿನ ಪರಿಶುದ್ಧತೆಯ ಕುರಿತ ಪ್ರಾತ್ಯಕ್ಷಿಕೆ, ಜೇನು ಸಾಕಣೆಯ ಕುರಿತು ಪ್ರಾತ್ಯಕ್ಷಿಕೆ, ಜೇನು ಕೃಷಿ ಉತ್ಪನ್ನ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ಜೇನುತುಪ್ಪಗಳ ಪ್ರದರ್ಶನ ಮತ್ತು ಸವಿಯುವ ಅವಕಾಶ, ಜೇನು ಕೃಷಿ ಉಪಕರಣಗಳು, ವಿವಿಧ ಜೇನು ಪ್ರಭೇದಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿವಿಧ ಬಗೆಯ ಜೇನು, ಮೇಣದಿಂದ ಮಾಡಿದ ಲಿಪ್ ಬಾಂಮ್ ಗಳು, ಬೊಂಬೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕಮಡಿಕೇರಿ ವಿಸ್ತರಣ ಶಿಕ್ಷಣ ಘಟಕದ ಸಹ ಪ್ರಾಧ್ಯಾಪಕ ಡಾ. ಹೇಮಂತ್ ಕುಮಾರ್, ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.