ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ: ಸಮಯಪ್ರಜ್ಞೆಯಿಂದ ತಾಯಿ-ಮಗು ಸುರಕ್ಷಿತ

ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ:  ಸಮಯಪ್ರಜ್ಞೆಯಿಂದ ತಾಯಿ-ಮಗು ಸುರಕ್ಷಿತ
Photo credit:X

ಮುಂಬೈ, ಅ.16: ಮುಂಬೈನ ರಾಮ ಮಂದಿರ್ ರೈಲು ನಿಲ್ದಾಣದಲ್ಲಿ ನಡೆದ ಅಪರೂಪದ ಘಟನೆ ಮಾನವೀಯತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಯುವಕನೋರ್ವ ತುರ್ತು ಸಂದರ್ಭದಲ್ಲೇ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗು ಇಬ್ಬರ ಜೀವವನ್ನು ಉಳಿಸಿದ ಘಟನೆ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.

 ಗುರುವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ರಾಮ ಮಂದಿರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲತೊಡಗಿದಾಗ, ಪ್ರಯಾಣಿಕ ಮಂಜಿತ್ ಧಿಲ್ಲನ್ ಎಂಬ ಯುವಕ ಪರಿಸ್ಥಿತಿಯನ್ನು ಅರಿತು ತಕ್ಷಣವೇ ರೈಲಿನ ಎಮರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸಿದರು. ಬಳಿಕ ವೀಡಿಯೋ ಕಾಲ್ ಮೂಲಕ ವೈದ್ಯರೊಬ್ಬರಿಂದ ಮಾರ್ಗದರ್ಶನ ಪಡೆದು ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದರು.

ಆಂಬುಲೆನ್ಸ್ ತಲುಪಲು ವಿಳಂಬವಾಗುತ್ತಿದ್ದುದರಿಂದ ವೈದ್ಯರು ವೀಡಿಯೋ ಕಾಲ್ ಮೂಲಕ ಕ್ರಮವಾಗಿ ಸೂಚನೆ ನೀಡಿದ್ದು, ಧಿಲ್ಲನ್ ಅವರು ಅದನ್ನೇ ಅನುಸರಿಸಿ ಮಹಿಳೆಗೆ ಸಹಾಯ ಮಾಡಿದರು. ಈ ಕ್ರಮದಿಂದ ತಾಯಿ ಹಾಗೂ ನವಜಾತ ಶಿಶು ಇಬ್ಬರೂ ಸುರಕ್ಷಿತರಾದರು.

 ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡು, “ಆ ಕ್ಷಣದಲ್ಲಿ ದೇವರೇ ಈ ಯುವಕನನ್ನು ಕಳುಹಿಸಿದ್ದಾನೆ ಎಂಬ ಭಾವನೆ ಉಂಟಾಯಿತು. ಆತನ ಧೈರ್ಯ ಮತ್ತು ಮಾನವೀಯತೆ ಶ್ಲಾಘನೀಯ,” ಎಂದು ಬರೆದಿದ್ದಾರೆ.

ಮಹಿಳೆಯ ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ, “ಇನ್ನೂ ಸಮಯವಿದೆ” ಎಂದು ವೈದ್ಯರು ಹಿಂದಕ್ಕೆ ಕಳುಹಿಸಿದ್ದರಿಂದ ಅವರು ರೈಲಿನಲ್ಲಿ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ.

ಮಂಜಿತ್ ಧಿಲ್ಲನ್ ಅವರ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಗಳ ಸುರಿಮಳೆ ಹರಿಯುತ್ತಿದ್ದು, ನೆಟಿಜನ್‌ಗಳು ಅವರನ್ನು “ಸಮವಸ್ತ್ರದಲ್ಲಿರದ ನಿಜವಾದ ಹೀರೋ” ಎಂದು ಕೊಂಡಾಡುತ್ತಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.