ಹೊದ್ದೂರು:2.17 ಕೋಟಿ ವೆಚ್ಚದ 09 ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ

ಮಡಿಕೇರಿ: ದೇಶದ ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳ ಅಭಿವೃದ್ಧಿಯಾಗಬೇಕು. ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯವನ್ನು ಬದಿಗಿಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸುವುದು ಅತೀ ಮುಖ್ಯ ಎಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೆಮಾಡು ಕಾನ್ಸೀರಾಂಜೀ ನಗರದಲ್ಲಿ ಸುಮಾರು 2.17 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 9 ಕಾಂಕ್ರೀಟ್ ರಸ್ತೆಗಳನ್ನು ಬದಿಗಿಟ್ಟು ಉದ್ಘಾಟಿಸಿ ಮಾತನಾಡಿದ ಅವರು, ಕಾನ್ಸಿರಾಂಜೀ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯಾದ್ಯಂತ ಬಡ ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಮಾತನಾಡಿ ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲೆಮಾಡುವಿಗೆ ಮೊದಲ ಸರ್ಕಾರಿ ಬಸ್ಸು, ಇಲ್ಲಿನ ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿರುವುದು ಹಾಗೂ ನೂತನವಾದ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಸಂಬಂಧ ಶಾಸಕರು ಸದಾ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಮೊಣ್ಣಪ್ಪ, ನಗರಕ್ಕೆ ಅಗತ್ಯವಿರುವ ಅಂಬೇಡ್ಕರ್ ಭವನ ಮತ್ತು ಇನ್ನಿತರ ಬೇಡಿಕೆಗಳ ಅರ್ಜಿಯನ್ನು ಶಾಸಕರಿಗೆ ನೀಡಿದರು.
ಶಾಸಕರಾದ ಡಾ. ಮಂಥರ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್.ಎ.ಹಂಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರದ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕುಸುಮಾವತಿ ಮೊಯ್ದು ಕೊಟ್ಟಮುಡಿ, ಎಂ.ಬಿ. ಹಮೀದ್ ಕಬಡಕೇರಿ, ವೈ.ಎಂ. ಲಕ್ಷ್ಮೀ ಮತ್ತು ಪೆಗ್ಗೋಳಿ ನಿವೇಶನ ಹೋರಾಟಗಾರ ಕಿರಣ್, ಜಗದೀಶ್, ಮಹೇಶ್, ನಗರದ ಅಭಿವೃದ್ಧಿ ಸಮಿತಿಯ ಸದಸ್ಯರು, ಮಹಿಳಾ ಸಂಘಟನಾ ಸದಸ್ಯರು, ಅಂಬೇಡ್ಕರ್ ಯುವಕ ತಂಡದವರು ಹೋರಾಟಗಾರರು ಮತ್ತು ನಗರದ ಸಾರ್ವಜನಿಕರು ಹಾಜರಿದ್ದರು. ಎಂ ರಂಜಿತ್ ಮೌರ್ಯ ನಿರೂಪಿಸಿ, ವಂದಿಸಿದರು.