ವಚನಗಳ ತಾಡೋಲೆಗಳಿಂದ ಕನ್ನಡ ನಾಡು ಕೈಲಾಸ: ಕೊಡಗು ವಿವಿಯಲ್ಲಿ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಉದ್ಘಾಟಿಸಿ ಡಾ.ಸಿ.ಸೋಮಶೇಖರ್ ಬಣ್ಣನೆ

ವಚನಗಳ  ತಾಡೋಲೆಗಳಿಂದ ಕನ್ನಡ  ನಾಡು ಕೈಲಾಸ:  ಕೊಡಗು ವಿವಿಯಲ್ಲಿ  ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಉದ್ಘಾಟಿಸಿ ಡಾ.ಸಿ.ಸೋಮಶೇಖರ್ ಬಣ್ಣನೆ

ಕುಶಾಲನಗರ : ವಚನ ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸಿ, ಅಚ್ಚುಹಾಕಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಕನ್ನಡ ನಾಡನ್ನು ಕೈಲಾಸ ಮಾಡಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಹೇಳಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ವಿವಿ ವತಿಯಿಂದ ಚಿಕ್ಕ ಅಳುವಾರದ ವಿವಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪಿತಾಮಹ, ಸಚೇತನ ವಿಶ್ವವಿದ್ಯಾಲಯ, ವಚನ ಗುಮ್ಮಟ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಯುಜನಾಂಗ ಹಾಗೂ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು.

ಅಂತಹ ವಚನ ಸಾಹಿತ್ಯವನ್ನು ಸಂರಕ್ಷಿಸಿದವರು ಫ.ಗು. ಹಳಕಟ್ಟಿ.ತಾಳೆ ಗರಿಯಲ್ಲಿದ್ದ ವಚನದ ಕಟ್ಟುಗಳನ್ನು ಸಂಗ್ರಹಿಸಲು ಅಪಾರ ಶ್ರಮಿಸಿದ ಇವರು, ಶಾಲೆಗಳು ಹಾಗೂ ಸಹಕಾರಿ ಸಂಘಗಳನ್ನು ತೆರೆದು ಅಪಾರ ಮಂದಿ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ.ಇಂತಹ ಆದರ್ಶ ವ್ಯಕ್ತಿಗಳ ಜೀವನ ದರ್ಶನ ಇಂದಿನ ಯುವಕರಿಗೆ ಮಾದರಿಯಾಗಬೇಕು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ತಮ್ಮ ಬದುಕನ್ನೇ ಧಾರೆಯೆರೆದ ಹಳಕಟ್ಟಿ ಇಲ್ಲದಿದ್ದರೆ ವಚನ ಸಾಹಿತ್ಯ ತನ್ನ ಹೊಳಪು ಕಳೆದುಕೊಳ್ಳುತ್ತಿತ್ತು.ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ, ಧಾರ್ಮಿಕ, ನೈತಿಕ ಕ್ರಾಂತಿ ವಿಶ್ವಕ್ಕೆ ಜೀವನದ ಸಂವಿಧಾನವನ್ನು ಕೊಟ್ಟಿತು ಎಂದು ಡಾ.ಸೋಮಶೇಖರ್ ಹೇಳಿದರು.

ಮುಖ್ಯ ಅತಿಥಿ ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಸಿ.ತಾರಾನಾಥ್ ಮಾತನಾಡಿ, ಫ.ಗು.ಹಳಕಟ್ಟಿಯವರ ಸಮಗ್ರ ಜೀವನ ಕೇವಲ ವಚನ ಸಾಹಿತ್ಯವಲ್ಲ. ನಾಡಿನ ಶ್ರೇಷ್ಠ ಕವಿ ಚೆನ್ನವೀರಕಣವಿ ಅವರು ಬರೆದಂತೆ ಅವರ ಸತ್ಕಾರ್ಯಗಳು ಸಮಾಜದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿತ್ತು.ಫ.ಗು.ಹಳಕಟ್ಟಿ ಅವರ ಕಾಯ, ಕರ್ಮ,ತೊಡುಗೆ ಸಮನ್ವಯವಾಗಿತ್ತು.ಅನುಭವ ಹಾಗೂ ಅನುಭಾವದಿಂದ ಕೂಡಿತ್ತು.ವಚನಗಳಲ್ಲಿ ಇರುವ ವೈಜ್ಞಾನಿಕತೆ, ಧಾರ್ಮಿಕತೆ, ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಜೀವನ ಸಂವಿಧಾನವನ್ನು ಅಧ್ಯಯನ ಮಾಡದ ನಾವುಗಳು ಇಂದು ಮೊಬೈಲ್ ಗಳು ಹಾಗೂ ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿರುವುದು ವಿಪರ್ಯಾಸ ಎಂದರು. 

ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಮಾತನಾಡಿ, ಹನ್ನೆರಡನೇ ಶತಮಾನದ ಕಲ್ಯಾಣದಲ್ಲಿ ನಡೆದ ಕ್ರಾಂತಿಯಿಂದಾಗಿ ಹಾಳಾಗಿದ್ದ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ, ಸಂಶೋಧಿಸಿ,ಅಚ್ಚು ಹಾಕಿಸಿ ಲಕ್ಷಾಂತರ ವಚನಗಳನ್ನು ಜನಮಾನಸಕ್ಕೆ ತಲುಪಿಸಲು ಫ.ಗು.ಹಳಕಟ್ಟಿ ಈ ಶತಮಾನ ಕಂಡ ಶ್ರೇಷ್ಟ ದಾರ್ಶನಿಕ ಸಂತ. ಕನ್ನಡ ನಾಡಿನ ಶ್ರೇಷ್ಠ ಕವಿ ಬಿ.ಎಂ.ಶ್ರೀಕಂಠಯ್ಯ ಬಿಜಾಪುರಕ್ಕೆ ಭೇಟಿ ಕೊಟ್ಟಾಗ ಗೋಳಗುಮ್ಮಟಕ್ಕಿಂತ ವಚನ ಗುಮ್ಮಟವಾದ ಫ.ಗು.ಹಳಕಟ್ಟಿಯವರ ಮನೆಯನ್ನು ನೋಡಲು ಕೌತುಕದಿಂದ ತೆರಳಿದ್ದರು.ಸ್ವಂತ ಮನೆಯೂ ಕೂಡ ಇಲ್ಲದ, ಸೈಕಲ್ ನಲ್ಲಿ ಊರೂರು ಅಲೆದು ವಚನಗಳ ತಾಡೋಲೆಗಳನ್ನು ಸಂಗ್ರಹಿಸಿದ್ದರಿಂದ ಇಂದು ನಾವು ಸಹಸ್ರಾರು ವಚನಗಳನ್ನು ನೋಡಲು, ಅಭ್ಯಸಿಸಲು ಸಾಧ್ಯವಾಗಿದೆ.ಕೇವಲ ವಚನ ಸಾಹಿತ್ಯವಷ್ಟೇ ಅಲ್ಲದೆ ಕನ್ನಡ ನಾಡು, ನುಡಿ, ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡ ಹಳಕಟ್ಟಿಯವರು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಒಡನಾಡಿಯಾಗಿ ನಾಡು ನುಡಿಗೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ಶ್ರೇಷ್ಠ ಚೇತನ ಎಂದು ಕುಲಪತಿ ಡಾ.ಅಶೋಕ್ ಆಲೂರ ಬಣ್ಣಿಸಿದರು.

ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಬಸವೇಶ್ವರರ ಬಗ್ಗೆ ಮಾತನಾಡಿದಾಗ ಬಸವಣ್ಣ ಕರ್ನಾಟಕದಲ್ಲಿ ಅಲ್ಲದೇ ಅಮೇರಿಕಾದಲ್ಲಿ ಜನಿಸಿದ್ದರೆ ಇಡೀ ಅಮೇರಿಕಾ ಬಸವ ಮಯವಾಗುತ್ತಿತ್ತು ಎಂದದ್ದನ್ನು ಡಾ.ಅಶೋಕ್ ಮಾರ್ಮಿಕವಾಗಿ ನುಡಿದು, ಬಸವಣ್ಣನ ವಿಚಾರಧಾರೆಗಳನ್ನು ಅರಿಯಲು ಕರೆಕೊಟ್ಟರು.ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಅತೀತವಾದುದು. ಅಳಿಯುತ್ತಿದ್ದ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಹಳಕಟ್ಟಿಯವರು ಶ್ರಮಿಸಿದ್ದರಿಂದಲೇ ಈ ಸಾಹಿತ್ಯವನ್ನು ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಸುತ್ತೂರು ಜಗದ್ಗುರು ಡಾ.ಶ್ರೀ ರಾಜೇಂದ್ರ ಸ್ವಾಮೀಜಿ ಯವರು ಶರಣ ಸಾಹಿತ್ಯ ಪರಿಷತ್ತು ರಚಿಸಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹಾಗಾಗಿ ಎಲ್ಲರೂ ಬಸವಾದಿ ಶರಣರು ಸಾರಿದ " ಇವನಾರವ ಎನ್ನದೇ ಇವ ನಮ್ಮವ " ಎಂದು ಎಲ್ಲರನ್ನೂ ಅಪ್ಪಿದ ಆಧ್ಯಾತ್ಮಿಕ ಚಿಂತನೆಯ ಸಾಹಿತ್ಯವೇ ವಚನ ಸಾಹಿತ್ಯ ಎಂದು ಶ್ರೀಗಳು ವಿಶ್ಲೇಷಿಸಿದರು.

ವಿವಿ ಕುಲಸಚಿವರಾದ ಸುರೇಶ್ ಮಾತನಾಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇರ ಗಾಂಜಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ,ಬೆಂಗಳೂರಿನ ಬಸವ ಬಳಗದ ಪ್ರಮುಖರಾದ ಸರ್ವಮಂಗಳ ಸೋಮಶೇಖರ್, ಸಾಹಿತಿ ಭಾರಧ್ವಜ್ ಕೆ.ಆನಂದ ತೀರ್ಥ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಇದ್ದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಸ್ವಾಗತಿಸಿದರು.ಕೊಡಗು ವಿವಿ ಉಪನ್ಯಾಸಕ ಡಾ.ಜಮೀರ್ ಅಹಮದ್ ನಿರೂಪಿಸಿದರು.ವಿವಿಯ ಸಂಶೋಧನಾ ವಿದ್ಯಾರ್ಥಿಗಳಾದ ಶಮಿತಾ, ಸ್ನಿತಾ ತಂಡ ವಚನ ಗಾಯನ ಏರ್ಪಟ್ಟಿತು.