ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿಬಿದ್ದ ಬೊಲೆರೋ: ಚಾಲಕ ಪ್ರಾಣಾಪಾಯದಿಂದ ಪಾರು

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಚಾಲಕನ ನಿಯಂತ್ರಣ ತಪ್ಪಿದ ಮಹೇಂದ್ರ ಬೊಲೆರೋ ವಾಹನವೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ವಿರಾಜಪೇಟೆ ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ನರಿಯಂದಡ ಗ್ರಾಮದಲ್ಲಿ ನಡೆದಿದೆ.
ಚೆಯ್ಯಂಡಾಣೆ ಕಡೆಯಿಂದ ಕಡಂಗಕ್ಕೆ ತೆರಳುತ್ತಿದ್ದ ಬೊಲೆರೋ ವಾಹನ ನರಿಯಂದಡ ಗ್ರಾಮದ ಕರಡ ಸೇತುವೆ ಸಮೀಪದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊವ್ವೇರಿಯಂಡ ಲವಕುಮಾರ್ ಎಂಬುವರ ಗದ್ದೆಗೆ ಉರುಳಿ ಬಿದ್ದಿದೆ.ಅಪಘಾತವಾದ ಅನತಿ ದೂರದಲ್ಲೇ ಕೆರೆ ಕೂಡ ಇದ್ದು ಬಾರಿ ಅನಾಹುತ ತಪ್ಪಿದಂತಾಗಿದೆ. ಅಪಘಾತದಿಂದ ಬೊಲೆರೋ ವಾಹನ ಜಖಂಗೊಂಡಿದ್ದು ವಾಹನದಲ್ಲಿ ಚಾಲಕನೊಬ್ಬನೇ ಇದ್ದು ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.