ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ: ಬ್ಯಾಂಕುಗಳು ಲಾಭಾಂಶದ ಜತೆಗೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿ: ಯದುವೀರ್ ಒಡೆಯರ್

Jun 21, 2025 - 17:20
 0  28
ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ:  ಬ್ಯಾಂಕುಗಳು ಲಾಭಾಂಶದ ಜತೆಗೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿ: ಯದುವೀರ್ ಒಡೆಯರ್

ಮಡಿಕೇರಿ:ವಾಣಿಜ್ಯ ಹಾಗೂ ಸಹಕಾರ ಬ್ಯಾಂಕುಗಳು ತಮ್ಮ ಲಾಭಾಂಶದ ಗುರಿ ಜೊತೆಗೆ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಲಹೆ ಮಾಡಿದ್ದಾರೆ.  ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಬ್ಯಾಂಕುಗಳು, ಕೃಷಿಕರು, ಉದ್ಯಮಿಗಳು, ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರು, ಗುಡಿ ಕೈಗಾರಿಕೆ... ಹೀಗೆ ಪ್ರತಿಯೊಬ್ಬರಿಗೂ ಸಾಲ ನೀಡುವುದರ ಜೊತೆಗೆ ಬ್ಯಾಂಕುಗಳ ಗುರಿ ಮತ್ತು ಪ್ರಗತಿ ಸಾಧಿಸುವಂತಾಗಬೇಕು. ಹಾಗೆಯೇ ಎಲ್ಲರನ್ನು ಒಳಗೊಂಡ ಸಾಧನೆ ಅತೀ ಮುಖ್ಯ ಎಂದು ಸಂಸದರು ಪ್ರತಿಪಾದಿಸಿದರು. 

ಬ್ಯಾಂಕುಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬ್ಯಾಂಕುಗಳ ವಾಣಿಜ್ಯ, ವ್ಯಾಪಾರ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹೀಗೆ ಆದ್ಯತಾ ವಲಯಕ್ಕೂ ಹೆಚ್ಚಿನ ಅವಕಾಶ ಮಾಡಬೇಕು ಎಂದು ಸಂಸದರು ನುಡಿದರು.  

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡುವಲ್ಲಿ ಬ್ಯಾಂಕುಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು. ಕೃಷಿ, ಬೆಳೆಸಾಲ, ಶೈಕ್ಷಣಿಕ ಸಾಲಕ್ಕೂ ಒತ್ತು ನೀಡಬೇಕು ಎಂದರು.  ಪ್ರತಿಯೊಬ್ಬರಿಗೂ ಆರ್ಥಿಕ ಶಿಕ್ಷಣ ನೀಡಿ ಬ್ಯಾಂಕುಗಳಲ್ಲಿ ಸಾಲ ಪಡೆದು ಪ್ರಗತಿಯತ್ತ ಮುನ್ನಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಸಂಸದರು ಹೇಳಿದರು. 

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಭಾಷೆ ಕಲಿಯುವ ಮೂಲಕ ಸ್ಥಳೀಯರಿಗೆ ಹತ್ತಿರವಾಗಬೇಕು. ಇದರಿಂದ ಸ್ಥಳೀಯರ ಸಮಸ್ಯೆ ಇತ್ಯರ್ಥಪಡಿಸಲು ಸಹಕಾರಿಯಾಗಲಿದೆ. ಸ್ಥಳೀಯ ಭಾಷೆ ಕಲಿಯುವುದರಿಂದ ಮಾನಸಿಕ ಸದೃಢತೆ ಹೆಚ್ಚಲಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಭಿಪ್ರಾಯಪಟ್ಟರು. ಇದಕ್ಕೆ ಧ್ವನಿಗೂಡಿಸಿದ ಆರ್‍ಬಿಐ ಎಜಿಎಂ. ಸೂರಜ್ ಅವರು ಆನ್‍ಲೈನ್ ಮೂಲಕ ಕನ್ನಡ ಕಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್ ಅವರು ಜಿಲ್ಲೆಯಲ್ಲಿ 130 ಗ್ರಾಮೀಣ ಬ್ಯಾಂಕು ಶಾಖೆಗಳಿದ್ದು, 50 ನಗರ ಬ್ಯಾಂಕ್ ಶಾಖೆಗಳಿವೆ ಎಂದು ತಿಳಿಸಿದರು.  2024-25 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್‍ಗಳ ಪ್ರಗತಿ ಬಗ್ಗೆ ವಿವರಿಸಿದರು. ಕೃಷಿ ಸಾಲ ಶೇ.99 ರಷ್ಟು ಸಾಧನೆ, ಸಣ್ಣ ಕೈಗಾರಿಕೆಗಳ ಉದ್ಯಮ ಶೇ.97 ರಷ್ಟು ಸಾಧನೆ, ಶೈಕ್ಷಣಿಕ ಸಾಲ ಶೇ.100 ರಷ್ಟು ಸಾಧನೆ, ವಸತಿ ಯೋಜನೆ ಶೇ.,74 ರಷ್ಟು ಸಾಧನೆ, ಇತರ ಆದ್ಯತಾ ವಲಯ ಶೇ.104 ರಷ್ಟು ಸಾಧನೆ, ಆದ್ಯತಾ ವಲಯ ಶೇ,98 ಸಾಧನೆ, ಆದ್ಯತೇತರ ವಲಯದಲ್ಲಿ ಶೇ.117 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. 

 ಪ್ರಸಕ್ತ (2025-26) ಸಾಲಿನಲ್ಲಿ 7,680.10 ಕೋಟಿ ರೂ.ನಷ್ಟು ವಾರ್ಷಿಕ ಜಿಲ್ಲಾ ಸಾಲ ಯೋಜನೆ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.ಕೃಷಿ ಬೆಳೆ ಸಾಲಕ್ಕಾಗಿ 3477.86 ಕೋಟಿ ರೂ., ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯಮಕ್ಕೆ 1388.42 ಕೋಟಿ ರೂ., ಶೈಕ್ಷಣಿಕ ಸಾಲಕ್ಕೆ 33.27 ಕೋಟಿ, ವಸತಿ ಯೋಜನೆಗೆ 59.46 ಕೋಟಿ, ಇತರೆ ಆದ್ಯತಾ ವಲಯಕ್ಕೆ 115.53 ಕೋಟಿ, ಒಟ್ಟಾರೆ ಆದ್ಯತಾ ವಲಯಕ್ಕೆ 5074.54 ಕೋಟಿ ರೂ., ಆದ್ಯತೇತರ ವಲಯಕ್ಕೆ 2606.56 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ ಎಂದು ಗಂಗಾಧರ ನಾಯಕ್ ಅವರು ಮಾಹಿತಿ ನೀಡಿದರು. 

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿ ರಮೇಶ್ ಬಾಬು ಅವರು ಮಾತನಾಡಿ ಕೃಷಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.  ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ವಲಯ ಮುಖ್ಯಸ್ಥರಾದ ಅರುಣ್ ಕುಲಕರ್ಣಿ ಅವರು ಮಾತನಾಡಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿವಿಧ ನಿಗಮದ ವ್ಯವಸ್ಥಾಪಕರಾದ ಮಹಾದೇವಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಚಿನ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಲಿಂಗಯ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯ ರೇಖಾ ಗಣಪತಿ, ಇತರರು ತಮ್ಮ ಇಲಾಖೆ ಪ್ರಗತಿ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0