ನಿರಂತರವಾಗಿ ಪರಿಸರದ ಬಗ್ಗೆ ಕಾಳಜಿ ಇರಲಿ: ಶೀಲಾ ಬೋಪಣ್ಣ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಗೋಣಿಕೊಪ್ಪ:ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ನಮ್ಮ ಪರಿಸರದ ಬಗ್ಗೆ ಆಸಕ್ತಿ ಮತ್ತು ಕಾಳಜಿ ವಹಿಸಿ ಪರಿಸರ ಸಂರಕ್ಷಣೆ ಒತ್ತು ನೀಡಬೇಕು.ಆದರೆ ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿ ನಮ್ಮೆಲ್ಲರ ಪರಿಸರ ಪ್ರೀತಿ ಇರಬಾರದೆಂದು ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಸಮೀಪದ ಅರ್ವತ್ತೊಕ್ಲುವಿನ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ,ಶಾಲೆಯಲ್ಲಿ ಪರಿಸರ ಸಂರಕ್ಷಣೆಯ ಘೋಷವಾಕ್ಯವನ್ನು ವಿದ್ಯಾರ್ಥಿಗಳು ಹೇಳಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮನೆಯಪಂಡ ಶೀಲಾ ಬೋಪಣ್ಣ,ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಮಾನವನ ಅತಿಯಾದ ದೌರ್ಜನ್ಯದಿಂದ ನಮ್ಮ ಸುಂದರವಾದ ಪರಿಸರ ನಾಶವಾಗುತ್ತಿದೆ.ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯುವುದು.ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಲು ಪಣತೊಡಬೇಕು ಎಂದರು.ಸರ್ವದೈವತ ಶಾಲೆಯ ವಿದ್ಯಾರ್ಥಿಗಳ ಜನ್ಮದಿದಂದು ವಿದ್ಯಾರ್ಥಿಗಳು ಶಾಲೆಯಲ್ಲೇ ಗಿಡನೆಡುವುದರ ಮೂಲಕ ಆಚರಿಸುತ್ತಿದ್ದಾರೆ ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಇದೇ ಸಂದರ್ಭ ಮನೆಯಪಂಡ ಶೀಲಾ ಬೋಪಣ್ಣ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಭಾಷಣ,ಸಮೂಗ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪೊನಿಮಾಡ ಪ್ರದೀಪ್ ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ಪರಿಸರ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್,ಶಿಕ್ಷಕಿ ಲೀನಾ ರಾಘವೇಂದ್ರ ಜೀವಶಾಸ್ತ್ರ ಉಪನ್ಯಾಸಕಿ ದೇಚಮ್ಮ,ಪ್ರಾಂಶುಪಾಲರಾದ ಪ್ರದೀಪ್ ಇದ್ದರು.
What's Your Reaction?






