ಪತ್ರಕರ್ತರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು: ಅಜ್ಜಮಾಡ ರಮೇಶ್ ಕುಟ್ಟಪ್ಪ

Jun 19, 2025 - 21:26
Jun 19, 2025 - 21:27
 0  45
ಪತ್ರಕರ್ತರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು: ಅಜ್ಜಮಾಡ ರಮೇಶ್ ಕುಟ್ಟಪ್ಪ

ಕುಶಾಲನಗರ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಪತ್ರಕರ್ತರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕಕೊಳ್ಳುವಂತಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಇಲ್ಲಿನ ಮಹಾಲಕ್ಷ್ಮಿ ರೆಸಿಡೆನ್ಸಿ ಸಭಾಂಗಣದಲ್ಲಿ ಏರ್ಪಡಿಸಿದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ಬೆಳ್ಳಿಪಯಣ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಇಂದಿಗೂ ಓದುಗರು ವಿಶ್ವಾಸ ಇಟ್ಟುಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ವರದಿಗಳು ಹೆಚ್ಚು ಜನರಿಗೆ ತಲುಪುತ್ತಿದೆ. ಮಾಧ್ಯಮದಲ್ಲಿನ ಕೆಲಸ ಸವಾಲಿನಿಂದ ಕೂಡಿದೆ. ಪರಿಣಾಮಕಾರಿ ವರದಿಗೆ ಪತ್ರಕರ್ತರು ಪ್ರಯತ್ನಿಸಬೇಕು. ಮಾಧ್ಯಮದವರು ಆಧುನಿಕ ತಂತ್ರಜ್ಞಾನ ರೂಢಿಸಿಕೊಳ್ಳಬೇಕು. ಮಾಧ್ಯಮಗಳು ಸಮಾಜದ ಪ್ರತಿಬಿಂಬ ಆಗಿರುವುದರಿಂದ ತಪ್ಪುಗಳಿದ್ದರೆ ಪ್ರಶ್ನೆ ಮಾಡಬೇಕು. ಪ್ರಚಾರ ಬಯಸುವವರ ಬೆನ್ನು ಹತ್ತುವ ಬದಲು ಸಮಾಜಕ್ಕೆ ಉಪಯೋಗ ಆಗುವ ವರದಿ ಮಾಡಬೇಕು. ವರದಿ ಮಾಡಿದ ವಿಷಯಗಳನ್ನು ವರದಿಗಾರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಮಾಧ್ಯಮಗಳು ಹೆಚ್ಚು ವಿಶ್ವಾಸರ್ಹವಾಗುವ ರೀತಿಯಲ್ಲಿ ವರದಿಗಳು ಬರುವಂತೆ ವರದಿಗಾರರ ವರದಿ ಇರಬೇಕು. ಬದಲಾವಣೆಗಳಿಗೆ ಎಲ್ಲಾ ತಲೆಮಾರುಗಳು ಹೊಂದಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮದವರಿಂದ ಸಮಾಜ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತದೆ. ಆದರೆ ಮಾಧ್ಯಮದ ಬಗ್ಗೆ ಸಮಾಜದ ದೃಷ್ಟಿಕೋನವೇ ಬೇರೆ ಇರುತ್ತದೆ ಎಂದರು.

ಬೆಳ್ಳಿಪಯಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಮನುಷ್ಯನಿಗೆ ವಯಸ್ಸಾದಂತೆ ಮಾಗುತ್ತಾ ಹೋಗುತ್ತಾನೆ. ಆದರೆ ಸಂಘಟನೆಗಳು ಹಳೆಯದಾದಷ್ಟು ಗಟ್ಟಿಗೊಳ್ಳುತ್ತವೆ. ಪತ್ರಕರ್ತ ಸಂಘಟನೆಗಳು ಹೆಚ್ಚು ಶಕ್ತಿಯುತವಾಗಬೇಕು. ಸದಸ್ಯತ್ವ ಕೊಡುವಾಗ ನೈಜ ಪತ್ರಕರ್ತರಿಗೆ ಮಾತ್ರ ಅವಕಾಶ ಕೊಡಬೇಕು ಎಂದರಲ್ಲದೆ, ಮಡಿಕೇರಿ ಮಾದರಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳ ನಿಷೇಧಕ್ಕೆ ಸ್ಥಳೀಯ ಪತ್ರಕರ್ತರು ಸಂಬಂಧಿಸಿದವರ ಜತೆ ವ್ಯವಹರಿಸಿ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ಹೇಳಿದರು.

 ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆ ಇದ್ದಂತೆ. ಈಗಿನ ಪತ್ರಕರ್ತರಲ್ಲಿ ವರದಿಗಾರಿಕೆಯ ಆಸಕ್ತಿ ಕಡಿಮೆ ಆಗುತ್ತಿದೆ. ಸುದ್ದಿ ಮಾಡಿದ ನಂತರ ಫಾಲೋ ಅಪ್ ಇರಬೇಕು. ತನಿಖಾ ವರದಿಗಳು ತಾರ್ಕಿಕ ಅಂತ್ಯಕ್ಕೆ ತಲುಪಿಸುವ ಬದ್ಧತೆ ಇರಬೇಕು ಎಂದರು.

 ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ,ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಜಿಲ್ಲಾ ಸಂಘದ ಖಜಾಂಚಿ ಆನಂದ್ ಕೊಡಗು, ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯ ಸುನಿಲ್ ಪೊನ್ನೇಟಿ, ವೇದಿಕೆಯಲ್ಲಿದ್ದರು.ಖಜಾಂಚಿ ಕುಡೆಕಲ್ಲು ಗಣೇಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಂಘದ ನಿರ್ದೇಶಕ ಟಿ.ಆರ್. ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿ, ರಘು ಹೆಬ್ಬಾಲೆ ವಂದಿಸಿದರು.

 ಇದಕ್ಕೂ ಮೊದಲು ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕೆ ಬಿ.ಆರ್. ಸವಿತಾ ರೈ, ರಾಷ್ಟ್ರೀಯ ಮಂಡಳಿ ಸದಸ್ಯ ಸುನಿಲ್ ಪೊನ್ನೇಟಿ, ಜಿಲ್ಲಾ ಸಂಘದ ವೀಕ್ಷಕ ಆನಂದ್ ಕೊಡಗು, ಕುಶಾಲನಗರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಇದ್ದರು.

ಪ್ರಶಸ್ತಿ ವಿತರಣೆ:

 ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ. ಅಯಿನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಮಾನವೀಯ ವರದಿಗಾಗಿ ಶಕ್ತಿ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ, ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರ ತಂದೆ, ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಚಂದ್ರಮೋಹನ್, ಮಾಜಿ ಸಚಿವ ಎಂ. ಪಿ. ಅಪ್ಪಚ್ಚು ರಂಜನ್ ಅವರು ಸ್ಥಾಪಿಸಿದ ಅತ್ಯುತ್ತಮ ರಾಜಕೀಯ ವರದಿಗೆ ಜಯಪ್ರಕಾಶ್, ಕುಶಾಲನಗರದ ಶಾರದಾ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘ ಬಗ್ಗೆ ವರದಿಗೆ ಕೆ.ಬಿ ಶಂಷುದ್ದೀನ್, ಪತ್ರಕರ್ತ ಟಿ. ಆರ್. ಪ್ರಭುದೇವ್ ಅವರ ತಂದೆ ದಿ. ಎನ್. ರಾಮಕೃಷ್ಣ ಮತ್ತು ತಾಯಿ ದಿ. ಕೆ. ಎಂ. ಸರಸಮ್ಮ ಅವರ ಸ್ಮರಣಾರ್ಥ ಸ್ಥಾಪಿಸಿರುವ ನೊಂದವರ ಪರ ವರದಿಗೆ ಟಿ.ಆರ್.ಪ್ರಭುದೇವ್, ಪತ್ರಕರ್ತ ಕೆ. ಬಿ. ಶಂಷುದ್ದಿನ್ ಅವರು ತಮ್ಮ ತಾಯಿ ದಿ.ಕೆ.ಕೆ.ಖತೀಜ ಅವರ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ವಿನೋದ್, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸ ದ ಖ್ಯಾತ ಪಾರಂಪರಿಕ ವೈದ್ಯೆ ಸುಮನ ಮಳಲಗದ್ದೆ ಅವರು ಸ್ಥಾಪಿಸಿದ ಪಾರಂಪರಿಕ ನಾಟಿ ವೈದ್ಯ ವರದಿ ಪ್ರಶಸ್ತಿಗೆ ಚೈತನ್ಯ ಚಂದ್ರಮೋಹನ್, ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಹಾಗೂ ತಾಯಿ ಯಶೋಧ ಅವರ ಜ್ಞಾಪಕಾರ್ಥ ಸ್ಥಾಪಿತ ದೃಶ್ಯ ವಾಹಿನಿಯ ಸಾಮಾಜಿಕ ಕಳಕಳಿಯ ವರದಿಗೆ ಕೆ.ಜೆ. ಶಿವರಾಜ್ ಪಾತ್ರರಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0