ಪೊನ್ನಂಪೇಟೆ: ಸ್ವಂತ ಹಣದಲ್ಲೇ ತ್ಯಾಜ್ಯವನ್ನು ತೆರವುಗೊಳಿಸಿ ಮಾದರಿಯಾದ ಎ.ಎಸ್ ಪೊನ್ನಣ್ಣ
ಪೊನ್ನಂಪೇಟೆ :- ಪೊನ್ನಂಪೇಟೆಯ ಕೆ.ಪಿ.ಎಸ್. ಶಾಲಾ ಮೈದಾನದ ಅಂಚಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಂಗ್ರಹಿಸಲಾಗಿದ್ದ ತ್ಯಾಜ್ಯವನ್ನು ತಮ್ಮ ಹಣದಲ್ಲೇ ತೆರವುಗೊಳಿಸುವ ಮೂಲಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾದರಿಯಾಗಿದ್ದಾರೆ.
ಪಟ್ಟಣದ ಕೆ.ಪಿ.ಎಸ್. ಶಾಲಾ ಮೈದಾನದ ಅಂಚಿನಲ್ಲಿ ಪಟ್ಟಣ ಪಂಚಾಯಿತಿ ಕಸವನ್ನು ಶೇಖರಣೆ ಮಾಡಲಾಗಿತ್ತು. ಈ ಬಗ್ಗೆ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೋಟಗಾರಿಕೆ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳು ಶಾಸಕರ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ ಸಭೆ ಮುಗಿದ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಶಾಲಾ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದರು. ಶಾಸಕ ಎ.ಎಸ್. ಪೊನ್ನಣ್ಣ ಅವರ ಸೂಚನೆ ಮೇರೆಗೆ ಬುಧವಾರ ಶಾಲಾ ಮೈದಾನದ ಬದಿಯಲ್ಲಿ ರಾಶಿ ಮಾಡಲಾಗಿದ್ದ ತ್ಯಾಜ್ಯವನ್ನು ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿತೆಗೆದು ತ್ಯಾಜ್ಯವನ್ನು ಹೂಳಲಾಯಿತು. ಉಳಿದ ತ್ಯಾಜ್ಯವನ್ನು ಟಿಪ್ಪರ್ ಮೂಲಕ ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಸವಿಲೇವಾರಿ ಘಟಕಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭ ಪೊನ್ನಂಪೇಟೆ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಕೆ. ಪಿ. ಎಸ್ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಜುನೈದ್ ಅವರು ಮಾತನಾಡಿ, ಶಾಸಕರ ಸೂಚನೆಯಂತೆ ಮೈದಾನದ ಅಂಚಿನಲ್ಲಿ ಶೇಖರಿಸಿದ್ದ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಅಲ್ಲದೆ ತ್ಯಾಜ್ಯವನ್ನು ತೆರವುಗೊಳಿಸುವ ವೆಚ್ಚವನ್ನು ಶಾಸಕ ಪೊನ್ನಣ್ಣ ಅವರೇ ಭರಿಸುತ್ತಿದ್ದು, ಶಾಲಾ ಆಡಳಿತ ಮಂಡಳಿ ಪರವಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ವರದಿ: ಚಂಪಾ ಗಗನ
What's Your Reaction?






