ಗರ್ಭಿಣಿ, ಬಾಣಂತಿಯರು ಹಾಗೂ ಶಿಶು ಪೋಷಣೆ ಬಗ್ಗೆ ಮಾಹಿತಿ ನೀಡುವಲ್ಲಿ ‘ಕಿಲ್ಕಾರಿ’ ಸೇವೆ ಆರಂಭ: ಡಾ.ಸತೀಶ್ ಕುಮಾರ್

ಗರ್ಭಿಣಿ, ಬಾಣಂತಿಯರು ಹಾಗೂ ಶಿಶು ಪೋಷಣೆ ಬಗ್ಗೆ ಮಾಹಿತಿ ನೀಡುವಲ್ಲಿ ‘ಕಿಲ್ಕಾರಿ’ ಸೇವೆ ಆರಂಭ: ಡಾ.ಸತೀಶ್ ಕುಮಾರ್

ಮಡಿಕೇರಿ ಜೂ.20:-ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕೋರಿದ್ದಾರೆ.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ``ಕಿಲ್ಕಾರಿ'' ಸೇವೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆ ಇದ್ದು, ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸರ್ಕಾರವು ಕಿಲ್ಕಾರಿ ಸೇವೆ ಜಾರಿಗೆ ತಂದಿದೆ. ಗರ್ಭಧಾರಣೆ, ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯದ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಫೋನ್‍ಗೆ ತಲುಪಿಸಲಾಗುತ್ತದೆ ಎಂದು ಅವರು ವಿವರಿಸಿದರು. 

ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಗರ್ಭಿಣಿಯರಿಗೆ ಕಾಲಕಾಲಕ್ಕೆ ಆರೋಗ್ಯ ಸೇವೆಗಳ ಮಾಹಿತಿ ನೀಡುವ ಮೂಲಕ ಹೆಚ್ಚಿನ ಕಾಳಜಿ ವಹಿಸಬೇಕು. ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುವುದು ಎಂದು ಎಚ್ಚರಿಸಿದರು. 

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, 'ಕಿಲ್ಕಾರಿ' ಎಂಬುದು ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಮೊಬೈಲ್ ಆಧಾರಿತ ಧ್ವನಿ ಸಂದೇಶ ಸೇವೆಯಾಗಿದೆ. ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವುದು ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಈ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ತಂದಿದ್ದು, ಇವುಗಳ ಬಗ್ಗೆ ಗರ್ಭಿಣಿಯರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಲಹೆ ನೀಡಿದರು. ಅಲ್ಲದೇ ಪೋರ್ಟಲ್‍ಗಳಲ್ಲಿ ಭಾಷೆ ಬಳಕೆ ಹಾಗೂ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಕಾರ್ಯಕ್ರಮ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಕಿಲ್ಕಾರಿ ಮೈಸೂರು ವಿಭಾಗದ ಕಾರ್ಯಕ್ರಮ ಅಧಿಕಾರಿ ಗುರುಪಾದ ಅವರು ಮಾತನಾಡಿ, ಕಿಲ್ಕಾರಿ ಸೇವೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಚಿತ ಮೊಬೈಲ್ ಆರೋಗ್ಯ ಸೇವೆಯಾಗಿದೆ. ನವಜಾತ ಶಿಶುಗಳ ಆರೋಗ್ಯ, ಲಸಿಕೆ, ಪೌಷ್ಟಿಕ ಆಹಾರ ಮತ್ತು ತಾಯಿ ಮಗು ಸುರಕ್ಷತೆ ಕುರಿತು ಜಾಗೃತಿ ಮೂಡಿಸುವಲ್ಲಿ ನೋಂದಾಯಿತ ಫಲಾನುಭವಿ ಗರ್ಭಿಣಿಯರು ಹಾಗೂ ತಾಯಂದಿರಿಗೆ ಮಾಹಿತಿ ನೀಡಲಾಗುವುದು. ಗರ್ಭಧಾರಣೆಯ ನಾಲ್ಕನೇ ತಿಂಗಳಿಂದ ಮಗುವಿನ ಮೊದಲ ಜನ್ಮದಿನದವರೆಗೆ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಉಚಿತವಾಗಿ ಮೊಬೈಲ್ ಕರೆಗಳು ಹಾಗೂ ತಿಂಗಳಿಗೊಮ್ಮೆ ಧ್ವನಿ ಸಂದೇಶದ ಮೂಲಕ ನೀಡಲಾಗುತ್ತದೆ ಎಂದರು. 

2016 ಜನವರಿ 15 ರಂದು ದೇಶಾದ್ಯಂತ ಕಿಲ್ಕಾರಿ ಸೇವೆಯನ್ನು ಆರಂಭಿಸಲಾಗಿದ್ದು, 2024 ಅಕ್ಟೋಬರ್ ನಲ್ಲಿ ಕರ್ನಾಟಕದಲ್ಲಿ ಈ ಸೇವೆ ವಿಸ್ತರಿಸಲಾಗಿದೆ. ಆಯಾಯ ರಾಜ್ಯಕ್ಕೆ ಸಂಬಂಧಿಸಿದಂತೆ ಭಾಷೆ ಬಳಕೆ ಮಾಡಲಾಗಿದೆ. ಹತ್ತಿರದ ಆಶಾ ಕಾರ್ಯಕರ್ತೆಯರು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳ ಮೂಲಕ ಆರ್‍ಸಿಎಚ್ ಪೋರ್ಟಲ್‍ನಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು. ``ಡಾ.ಅನಿತಾ'' ಎಂಬ ಕಾಲ್ಪನಿಕ ವೈದ್ಯರ ಧ್ವನಿಯಲ್ಲಿ ತಾಯಂದಿರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗುತ್ತದೆ ಎಂದರು.

ಕಿಲ್ಕಾರಿಯಲ್ಲಿ ತಿಂಗಳಿಗೆ ಒಂದರಂತೆ ಒಟ್ಟು 18 ಕರೆಗಳು ಬರುತ್ತವೆ. ಗರ್ಭಿಣಿಯ ಸಮಯದಲ್ಲೇ 06 ಕರೆಗಳು (4ನೇ ತಿಂಗಳಿಂದ ಕರೆಗಳು ಪ್ರಾರಂಭವಾಗುತ್ತವೆ) ಹಾಗೂ ಮಗು ಜನಿಸಿದ ನಂತರ 12 ಕರೆಗಳು ಬರುತ್ತವೆ. ಕಿಲ್ಕಾರಿ ಸೇವೆಯ ಸದುಪಯೋಗ ಪಡೆಯಲು 14423 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. 1600403660 ಸಂಖ್ಯೆಯಿಂದ ನೋಂದಾಯಿತ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಕರೆ ಬರುತ್ತದೆ. ಫಲಾನುಭವಿಗಳು ಕರೆ ಸ್ವೀಕಾರ ಮಾಡಿ ಮಾಹಿತಿ ಪಡೆಯಬಹುದು. ಕರೆ ಸ್ವೀಕಾರ ಮಾಡದಿದ್ದಲ್ಲಿ ಕರೆ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು. 

ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಈ ಕುರಿತು ಅರಿವು ಮೂಡಿಸಬೇಕು. ಪ್ರತಿಯೊಬ್ಬ ಫಲಾನುಭವಿಯನ್ನು ನೋಂದಣಿ ಮಾಡಿಸಿ ಎಲ್ಲರಿಗೂ ಈ ಸೇವಾಸೌಲಭ್ಯ ದೊರಕುವಂತೆ ಮಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು. ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ ಹಾಗೂ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಇದ್ದರು. ಜಿಲ್ಲಾ ಎಂ.ಇ ವ್ಯವಸ್ಥಾಪಕರಾದ ಭೂಮಿಕ ಸ್ವಾಗತಿಸಿ, ವಂದಿಸಿದರು.