ಕ್ಲೀನ್ ಕೂರ್ಗ್ ಸೈಕಲ್ ಜಾಥಾಕ್ಕೆ ಎ.ಎಸ್. ಪೊನ್ನಣ್ಣ ಬೆಂಬಲ
ಮಡಿಕೇರಿ; ಕೊಡಗಿನ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಸುರಕ್ಷಿತವಾಗಿಡುವ ಉದ್ದೇಶದಿಂದ ಕ್ಲೀನ್ ಕೂರ್ಗ್ ತಂಡ ಹಮ್ಮಿಕೊಂಡಿರುವ ಸೈಕಲ್ ಜಾಥಾದ ಅಂಗವಾಗಿ ಇಂದು ತಂಡದ ಸದಸ್ಯರು ವಿರಾಜಪೇಟೆಯಲ್ಲಿರುವ ಮಾನ್ಯ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಗೃಹ ಕಚೇರಿಗೆ ಭೇಟಿ ನೀಡಿ ಅಭಿಯಾನದ ಉದ್ದೇಶ ಮತ್ತು ಕಾರ್ಯಯೋಜನೆ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರು ತಂಡದ ಪರಿಸರ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿ, “ಸ್ವಚ್ಛ ಕೊಡಗು” ಎಂಬ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅಗತ್ಯವೆಂದು ಅಭಿಪ್ರಾಯಪಟ್ಟರು. ಕ್ಲೀನ್ ಕೂರ್ಗ್ ತಂಡದ ಈ ಜನಜಾಗೃತಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಶುಭ ಹಾರೈಕೆಗಳನ್ನು ತಿಳಿಸಿ, ಪರಿಸರ ಸಂರಕ್ಷಣೆಯಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಬೇಕೆಂದು ಆಶಿಸಿದರು.

