ಬಿಟ್ಟಂಗಾಲ ಬಾರ್ ನಲ್ಲಿ ಯುವಕನ ಮೇಲೆ ಕೊಲೆ ಯತ್ನ:ಆರು ಜನರ ಮೇಲೆ ಪ್ರಕರಣ ದಾಖಲು

Jun 24, 2026 - 23:13
 0  3.2k
ಬಿಟ್ಟಂಗಾಲ ಬಾರ್ ನಲ್ಲಿ ಯುವಕನ ಮೇಲೆ ಕೊಲೆ ಯತ್ನ:ಆರು ಜನರ ಮೇಲೆ ಪ್ರಕರಣ ದಾಖಲು
ಸಿಸಿಟಿವಿ ದೃಶ್ಯ

ಮಡಿಕೇರಿ, ಜೂ. 21: ಬಿಟ್ಟಂಗಾಲದ ಗರುಡ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ತೆರಳಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ದೇವಣಗೇರಿ ಗ್ರಾಮದ ಪುಗ್ಗೆರ ಚಂಗಪ್ಪ ಅವರ ಮೇಲೆ ಆರು ಜನರ ತಂಡ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ (BNS),2023 (U\s-118(1)_3(5) ಅಡಿಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಣಗೇರಿ ಗ್ರಾಮದ ಪುಗೆರ ಚಂಗಪ್ಪ ಎಂಬುವವರು ನೀಡಿದ ದೂರಿನ ಪ್ರಕಾರ, ಜೂ. 19ರಂದು ರಾತ್ರಿ 10.30ಕ್ಕೆ ಬಿಟ್ಟಂಗಾಲದ ಬಾರ್‌ನಲ್ಲಿ ಊಟ ಮಾಡುತ್ತಿದ್ದಾಗ ಇಬ್ಬರು ಯುವಕರು ಬಿಯರ್‌ಗಾಗಿ ಬಾರ್ ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದರು.

ಅವರನ್ನು ಸಮಾಧಾನಪಡಿಸಿ ಹೊರಗೆ ಕರೆದೊಯ್ದಾಗ 5-6 ಮಂದಿ ಸೇರಿ ಕಬ್ಬಿಣದ ರಾಡ್, ಕಲ್ಲು, ದೊಣ್ಣೆ ಹಾಗೂ ಬಿಯರ್ ಬಾಟಲಿಯಿಂದ ತಲೆ, ಕಣ್ಣಿನ ಭಾಗಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಹಲ್ಲೆಯಿಂದ ಕೆಳಗೆ ಬಿದ್ದಾಗಲೂ ಆರೋಪಿಗಳು ಹಲ್ಲೆ ಮುಂದುವರಿಸಿದ್ದರು. ಜೊತೆಗಿದ್ದ ವರುಣ್ ಹಾಗೂ ಬಿದ್ದಂಡ ಕಾರ್ಯಪ್ಪ ಭಯಗೊಂಡು ಸ್ಥಳಕ್ಕೆ ಬಂದಿಲ್ಲ ಎಂದು ಚಂಗಪ್ಪ ತಿಳಿಸಿದ್ದಾರೆ. ಹಲ್ಲೆ ನಡೆಸಿದವರು ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಗಾಯಾಳು ಚಂಗಪ್ಪ ಬೆಂಗಳೂರಿನ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಲ್ಲಿ 8 ವರ್ಷದಿಂದ ಉದ್ಯೋಗಿಯಾಗಿದ್ದು, ನೆಂಟರ ಮದುವೆಗೆಂದು ಊರಿಗೆ ಬಂದಿದ್ದರು.

ಹಲ್ಲೆಯಿಂದ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಮೊದಲು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ, ನಂತರ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದವರನ್ನು ಕಲಕ್, ಕೌಶಿಕ್, ರೋಶನ್, ವಿಷ್ಣು, ಕರಣ್, ತಪಸ್ವಿನಿ ಹಾಗೂ ಇಬ್ಬರು ಅಪರಿಚಿತರು ಎಂದು ಗಾಯಾಳು ಹೆಸರಿಸಿದ್ದಾರೆ. ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಾರ್ಡ್ ನಂ. 206ರಲ್ಲಿ ಜೂ. 21ರಂದು ಬೆಳಗ್ಗೆ 11.45ರಿಂದ 12.45ರವರೆಗೆ ಎಎಸ್‌ಐ ಚಂದ್ರಶೇಖರ್ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

What's Your Reaction?

Like Like 2
Dislike Dislike 1
Love Love 2
Funny Funny 3
Angry Angry 2
Sad Sad 3
Wow Wow 0