ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ

ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ

ಮಡಿಕೇರಿ ಜೂ.8:-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್ 2026 ರ ಮಾಹೆಗಳ ಹಂಚಿಕೆಯನ್ನು ಜೂನ್ ಮಾಹೆಯಲ್ಲಿಯೇ ವಿತರಣೆ ಮಾಡಲು ಆದೇಶಿಸಲಾಗಿರುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಏಕ-ಸದಸ್ಯ, ದ್ವಿ-ಸದಸ್ಯ ಮತ್ತು ತ್ರಿ-ಸದಸ್ಯ ಫಲಾನುಭವಿಗಳಿರುವ ಅಂತ್ಯೋದಯ (ಎಎವೈ) ಪಡಿತರ ಚೀಟಿಗಳಿಗೆ ಸಂಬಂದಪಟ್ಟಂತೆ ಮೇ-2026ರ ಮಾಹೆಯಲ್ಲಿಯೇ ಮೇ ಮತ್ತು ಜೂನ್ 2026 ಮಾಹೆಗಳ ನಿಗದಿಪಡಿಸಿದ ಪಡಿತರವು ಪೂರ್ಣ ಪ್ರಮಾಣದಲ್ಲಿ ವಿತರಣೆಯಾಗಿರುವುದರಿಂದ ಅಂತಹ ಪಡಿತರ ಚೀಟಿಗಳಿಗೆ ಜೂನ್-2026ರ ಮಾಹೆಯಲ್ಲಿ ಅನ್ನಬಾಗ್ಯ ಅಕ್ಕಿ ಹಂಚಿಕೆ ಇರುವುದಿಲ್ಲ.

ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಅಂತ್ಯೋದಯ(ಎಎವೈ) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಮತ್ತು ಪಿಹೆಚ್‍ಹೆಚ್(ಬಿಪಿಎಲ್) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳಿಗೆ 05 ಕೆ.ಜಿ ಅಕ್ಕಿಯನ್ನು ಹಂಚಿಕೆ ಮಾಡಲಾಗಿರುತ್ತದೆ. ಅದರಂತೆ ಮೇ ಮತ್ತು ಜೂನ್ 2026ರ ಮಾಹೆಗಳ ತಲಾ 5 ಕೆಜಿ ಪಡಿತರ ಅಕ್ಕಿಯನ್ನು ಹಂಚಿಕೆ ನೀಡಲಾಗಿದ್ದು, ಎರಡೂ ಮಾಹೆಗಳಿಗೆ ಸೇರಿ ಒಟ್ಟು 10 ಕೆ.ಜಿ ಅಕ್ಕಿಯನ್ನು ಜೂನ್-2026 ರ ಮಾಹೆಯಲ್ಲಿ ಒಂದೇ ಬಯೋಮೇಟ್ರಿಕ್ ದೃಢೀಕರಣದ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯವನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರಧಾನ್ಯಕ್ಕೆ ಮುಕ್ತ ಮಾರುಕಟ್ಟೆ ದರದ ಆಧಾರದಲ್ಲಿ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಭೀಮರಾಯ ಅವರು ತಿಳಿಸಿದ್ದಾರೆ.